ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, May 7, 2023

ಮರೆತುಹೋದ ಸಾಮ್ರಾಜ್ಯ-ವಿಜಯನಗರ

 ಪುಸ್ತಕ :- ಮರೆತುಹೋದ ಸಾಮ್ರಾಜ್ಯ-ವಿಜಯನಗರ ( Forgotten Empire-Vijayanagara )

ಮೂಲ ಲೇಖಕರು :- ರಾಬರ್ಟ್ ಸೆವೆಲ್

ಅನುವಾದ :- ಪ್ರೊ. ವೆಂಕಟಾಚಲ ಶಾಸ್ತ್ರಿ

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬಂತೆ ನಮ್ಮ ಮೂಲ ಅಸ್ಥಿತ್ವದ, ನಮ್ಮ ನೆಲದ ಜ್ಞಾನವಿಲ್ಲದವರ ಸಂಖ್ಯೆ ಹಿಂದೆ ಎಷ್ಟಿತೋ ಇವತ್ತಿಗೂ ಅಷ್ಟೇ ಇದೆ ಎನ್ನಲು ಈ ಪುಸ್ತಕವೇ ಸಾಕ್ಷಿ.. ಕಲೆ,ಸಾಹಿತ್ಯ, ವಾಸ್ತುಶಿಲ್ಪ, ವೈದ್ಯಕೀಯ, ವೈಜ್ಞಾನಿಕ ಎಲ್ಲಾ ಕ್ಷೇತ್ರಗಳಲ್ಲಿ ಪಾಶ್ಚಾತ್ಯರಿಗೂ ಮೀರಿಸುವ ಜ್ಞಾನ ಭಂಡಾರ ನಮ್ಮಲ್ಲಿದ್ದರೂ ಅದನ್ನು ದಾಖಲಿಸುವ ಪ್ರಯತ್ನ ಭಾರತೀಯರಿಂದ ಆಗಿದ್ದು ತೀರ ವಿರಳ. ಭಾರತದ ಇತಿಹಾಸವನ್ನು ವಿದೇಶಿ ಬರವಣಿಗೆಯಲ್ಲಿ ಹುಡುಕಿ ತಿಳಿಯುವ ಪರಿಸ್ಥಿತಿ ನಮ್ಮದಾಗಿದೆ. ನಮ್ಮದೇ ಇತಿಹಾಸವನ್ನು ಓದಿ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಿದೆ ಎಂದು ಪುರಸ್ಕಾರ ಪಡೆದ ಹಲವು ವಿದೇಶಿಗರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.. ನಮ್ಮವರಿಂದ ಮರೆತು ಮರೆಯಾಗಿದ್ದ ಇತಿಹಾಸದ ಸುವರ್ಣಯುಗವನ್ನು ನೆನಪಿಸಿ ಕಣ್ ತೆರೆಸಿದ ಸೆವೆಲ್‌ ಅವರಿಗೆ ಧನ್ಯವಾದ..

 ಭಾರತದ ಇತಿಹಾಸದಲ್ಲಿ ಕ್ರಿ.ಶ 1336 ಕಾಲಘಟ್ಟದಲ್ಲಿ ಒಂದು ರೋಚಕ ಘಟನೆ ಜರುಗಿತು. ಇಡೀ ದಕ್ಷಿಣ ಭಾರತದ ರಾಜಕೀಯ ಸ್ಥಿತಿಯಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ ಕಾಲ.. ಅದ್ಭುತ ಇತಿಹಾಸ ಸೃಷ್ಟಿಸಿದ ಅಮೋಘ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಅನುಪಮ ವರ್ಷ.. 

ಭಾರತ ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಂ ಆಡಳಿತದ ಪ್ರಾಬಲ್ಯವಿದ್ದ ಸಂದರ್ಭದಲ್ಲಿ ಹಿಂದೂ ಧರ್ಮದ ಉಳಿವಿಗಾಗಿ ಆಖಂಡ ದಕ್ಷಿಣ ಭಾರತದ ಉದ್ದಗಲಕ್ಕೂ ಗಡಿಹೊಂದಿದ ವಿಜಯನಗರ ಸಾಮ್ರಾಜ್ಯ ಬೆಳಕಿಗೆ ಬರುತ್ತದೆ‌. ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಹಲವು ಐತಿಹ್ಯಗಳು ದಂತಕಥೆಗಳಿವೆ. ನಾವೆಲ್ಲ ಕೇಳಿರುವಂತೆ ಮೊಲ ಬೇಟೆನಾಯಿಯ ಅಟ್ಟಿಸಿಕೊಂಡು ಹೋದ ಕತೆ, ವಿದ್ಯಾರಣ್ಯರ ಮಾರ್ಗದರ್ಶನದಂತೆ ಸಾಮ್ರಾಜ್ಯ ಸ್ಥಾಪನೆ, ಮುಸ್ಲಿಂ ಸೇನೆಯಲ್ಲಿದ್ದ ಇಬ್ಬರು ಯುವಕರು ಆನೆಗುಂದಿಗೆ ಬಂದು ನೆಲೆಸಿ ಹೊಸ ಸಾಮ್ರಾಜ್ಯ ಕಟ್ಟಿದ ಕತೆ. ಗುರು ವಿದ್ಯಾರಣ್ಯರ ಸೇವೆ ಮಾಡುತ್ತಿದ್ದ ಕುರುಬರ ಹುಡುಗ ಈ ಸಾಮ್ರಾಜ್ಯ ಸ್ಥಾಪಿಸಿದ ಹೀಗೆ ಹಲವು ಸ್ವಾರಸ್ಯಕರ ಘಟನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.. 

ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಹಲವು ಇತಿಹಾಸಕಾರರ ಹೇಳಿಕೆಗಳಲ್ಲಿ ಗೊಂದಲಗಳಿರುವುದರಿಂದ ಸ್ಥಾಪನೆಯ ಸ್ಪಷ್ಟವಾಗಿ ಮಾಹಿತಿ ಸಿಗುವುದಿಲ್ಲ.. ಆನೆಗುಂದಿಯಿಂದ ಈ ಸಾಮ್ರಾಜ್ಯ ಬುನಾದಿ ಪ್ರಾರಂಭವಾಗಿ ವಿದ್ಯಾರಣ್ಯರ ಆಶೀರ್ವಾದದಿಂದ ಬೆಳೆಯಿತು ಎಂಬುದು ನಿರ್ವಿವಾದವಾಗಿದೆ…

ವಿಜಯನಗರ ಸಾಮ್ರಾಜ್ಯ ಎಂದಾಕ್ಷಣ ಮುತ್ತು ರತ್ನಗಳನ್ನು ಸಂತೆಗಳಲ್ಲಿ ರಾಶಿ ಹಾಕಿ ಮಾರವಷ್ಟು ಶ್ರೀಮಂತ ಸಾಮ್ರಾಜ್ಯ ಎಂದು ನಾವೆಲ್ಲ ಓದಿದ್ದೇವೆ. ಆ ಸಂಪತ್ತಿನ ಮೂಲದ ಬಗ್ಗೆ ಹಲವು ರೋಚಕ ಘಟನೆಗಳು ಇಲ್ಲಿವೆ.. ಕೋರಮಂಡಲ ಸಮುದ್ರದಲ್ಲಿನ ದ್ವೀಪದಲ್ಲಿಯೊಂದರಲ್ಲಿ ವಜ್ರ ವೈಡೂರ್ಯ ದೊರೆಯಿತೆಂದು ಅಲ್ಲಿಗೆ ಹೋಗಲು ರಾಜ ಕಲ್ಲಿನ ಸೇತುವೆ ಕಟ್ಟಿಸಿದ್ದ ನಂತರ ಅದು ಸಮುದ್ರದಲ್ಲಿ ಮುಳುಗಿತೆಂದು ಹೀಗೆ ಹಲವು ರೋಚಕ ಮಾಹಿತಿಯನ್ನು ನೀಡಲಾಗಿದೆ. ನಮಗೆ ಜಗತ್ ಪ್ರಸಿದ್ಧ ಕೊಹಿನೂರ್ ವಜ್ರದ ಬಗ್ಗೆ ಗೊತ್ತು, ಇದು ವಿಜಯನಗರದ ನೆರೆಯ ರಾಜ್ಯವಾಗಿದ್ದ ಹೈದ್ರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಗೋಲ್ಕೊಂಡ ಕೋಟೆಯಿಂದ ದೆಹಲಿ ಸುಲ್ತಾನರ ವಶಕ್ಕೆ ಹೋಗುತ್ತದೆ. ಗೋಲ್ಕೊಂಡದ ಸಮೀಪದಲ್ಲಿ ವಜ್ರದ ಬೃಹತ್ ಗಣಿ ಇದ್ದಿತು ಅಲ್ಲಿಂದ ವಿಜಯನಗರಕ್ಕೆ ಬೆಲೆಬಾಳುವ ವಜ್ರ ವೈಡೂರ್ಯಗಳು ಬರುತ್ತಿದ್ದವು, ಹೀಗೇ ಸಂಪತ್ತಿನ ಮೂಲದ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಪ್ರೌಢದೇವರಾಯ,ಕೃಷ್ಣದೇವರಾಯನ ಕಾಲದಲ್ಲಿನ ಸುವರ್ಣಯುಗ ಧಾರ್ಮಿಕ ಸೌಹಾರ್ದತೆ, ಆರ್ಥಿಕ ಪ್ರಗತಿ, ಸಾಮ್ರಾಜ್ಯದ ವಿಸ್ತರಣೆ, ಪೋರ್ಚುಗೀಸ್‌ರ ನಡುವಿನ ಬಾಂದವ್ಯ,ಗೋವ ಹಾಗೂ ಅನ್ಯ ದೇಶಗಳೊಂದಿಗೆ ವಿಜಯನಗರದ ಸಹಸಂಬಂಧ ಹೀಗೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ವಿಜಯನಗರ ಸಾಮ್ರಾಜ್ಯದ ಅವನತಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಘಟನೆಗಳು, ಕೃಷ್ಣ ನದಿಯ ಉತ್ತರಕ್ಕಿದ್ದ ಮುಸ್ಲಿಂ ಸಾಮ್ರಾಜ್ಯದೊಂದಿಗಿನ ವೈರತ್ವ, ಗೋವಾದ ವ್ಯಾಪಾರ ಸಂಪರ್ಕ ಕಡಿತದಿಂದ ಆರ್ಥಿಕ ಹಿನ್ನಡೆ ಹಾಗೂ ಸಾಮ್ರಾಜ್ಯ ಅವನತಿಗೆ ಕಾರಣವಾದ ರಕ್ಕಸತಂಗಡಗಿ ( ತಾಳಿಕೋಟೆ ) ಕದನದಲ್ಲಿ ಭಾಗವಹಿಸಿ ಹೋರಾಡಿದ ರೀತಿ ಹಾಗೂ ವಿಜಯನಗರದ ದೇವಾಲಯಗಳ ನಾಶ, ಸಂಪತ್ತಿನ ಲೂಟಿ ಹೀಗೆ ಹಲವು ಘಟನೆಗಳನ್ನು ಇಲ್ಲಿಗೆ ಭೇಟಿ ನೀಡಿದ ವಿದೇಶಿ ಬರಹಗಾರ ಉಲ್ಲೇಖಗಳಿಂದ ಹಾಗೂ ತಾನು ಕಂಡ ಸಾಮ್ರಾಜ್ಯದ ಅವಷೇಶಗಳಿಂದ ವಿಜಯನಗರ ಇತಿಹಾಸವನ್ನು ನಮಗೆ ಪರಿಚಯಿಸುವ ಕಾರ್ಯ ಮಾಡಲಾಗಿದೆ‌‌.. ಇತಿಹಾಸದಲ್ಲಿ ಆಸಕ್ತಿ ಇರುವವರು ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಯ ಬಯಸುವವರು ಈ ಪುಸ್ತಕ ಓದಲೇ ಬೇಕು. ಇದು ಸಂಕ್ಷಿಪ್ತ ಆವೃತ್ತಿಯಾಗಿದ್ದು, ಇದೇ ಹೆಸರಿಂದ ಸಂಪೂರ್ಣ ಪುಸ್ತಕ ಸಹ ದೊರೆಯುತ್ತದೆ.

No comments: