ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Monday, June 29, 2020

ರಚನಾವಾದ

ಒಂದು ನೀತಿ ಕಥೆ.....✍🏼
ಒಂದಾನೊಂದು ಕಾಲದಲ್ಲಿ ಇಬ್ಬರು ನೆರೆಹೊರೆಯಲ್ಲಿ ವಾಸವಾಗಿದ್ದರು..
ಒಬ್ಬರು ನಿವೃತ್ತ ಶಿಕ್ಷಕ
ಇನ್ನೋರ್ವ ಜೀವವಿಮಾ ಕಂಪನಿಯ ನೌಕರ..
ಜೀವ ವಿಮಾ ಕಂಪನಿ ನೌಕರನಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಒಲವಿತ್ತ.. ಇವರಿಬ್ಬರೂ ತಮ್ಮ ಮನೆಯ ಹೂದೊಟದಲ್ಲಿ ಸಸಿಗಳನ್ನು ನೆಟ್ಟರು..
ನಿವೃತ್ತ ಶಿಕ್ಷಕ ತನ್ನ ಸಸಿಗಳಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡುತ್ತಿದ್ದ . ಅವುಗಳ ಬಗ್ಗೆ ಹೆಚ್ಚಿನ ಗಮನ ಸಹ ನೀಡುತ್ತಿರಲಿಲ್ಲ..
ಆದರೆ ಜೀವ ವಿಮಾ ನೌಕರ ತನ್ನ ಸಸಿಗಳಿಗೆ ಯಥೇಚ್ಛವಾಗಿ ನೀರು ಗೊಬ್ಬರವನ್ನು ನೀಡಿ ಅವುಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದ..
ನಿವೃತ್ತ ಶಿಕ್ಷಕನ ಸಸ್ಯಗಳು ಸಾಧಾರಣವಾಗಿ, ಪರವಾಗಿಲ್ಲ ಅನ್ನುವ ರೀತಿಯಲ್ಲಿ ಬೇಳೆದಿದ್ದವು..
ಆದರೆ ಜೀವ ವಿಮಾ ನೌಕರನ ಸಸ್ಯಗಳು ಸಮೃದ್ಧವಾಗಿ, ಹಚ್ಚು ಹಸಿರಾಗಿ ಬೇಳೆದಿದ್ದವು..
ಒಂದು ರಾತ್ರಿ ಚಂಡಮಾರುತದ ಪರಿಣಾಮವಾಗಿ ಬಾರಿ ಮಳೆ ಮತ್ತು ಬಿರುಗಾಳಿ ಯ ಉಂಟಾಯಿತು.. ಮರುದಿನ ಬೆಳಿಗ್ಗೆ ಇಬ್ಬರೂ ತಮ್ಮ ತಮ್ಮ ಸಸಿಗಳಿಗೆ ಆದ ಹಾನಿ ನೋಡಲು ತಮ್ಮ ಹೂದೋಟಕ್ಕೆ ಹೋದರು..
ಜೀವ ವಿಮಾ ನೌಕರನ ಸಸ್ಯಗಳು ಬೇರು ಸಮೇತ ಹಾರಿ ಬಿದ್ದು ಸಂಪೂರ್ಣವಾಗಿ ನಾಶವಾಗಿದ್ದವು..
ಆದರೆ ನಿವೃತ್ತ ಶಿಕ್ಷಕಕನ ಸಸ್ಯಗಳು ದೃಡವಾಗಿ ಭದ್ರವಾಗಿ ನಿಂತಿದ್ದವು...
ಆಶ್ಚರ್ಯ ಚಕಿತನಾಗಿ ಜೀವ ವಿಮಾ ನೌಕರ ನಿವೃತ್ತ ಶಿಕ್ಷಕನ ಬಳಿ ಹೋಗಿ ಕೇಳಿದ,
"ನಾವಿಬ್ಬರು ಒಟ್ಟಾಗಿ ಸಸಿಗಳನ್ನು ನೆಟ್ಟಿದ್ದೆವು, ನಿಮಗಿಂತ ಹೆಚ್ಚಾಗಿ ನೀರು ಗೊಬ್ಬರವನ್ನೂ ನಾ ನೀಡಿ ಹೆಚ್ಚಿನ ಗಮನ ಹರಿಸಿದೆ, ಆದರೂ ನನ್ನ ಸಸ್ಯಗಳು ನಾಶವಾದವು, ನಿಮ್ಮ ಸಸ್ಯಗಳು ದೃಡವಾಗಿ ನಿಂತಿವೆ ಯಾಕೆ"...?
ಆಗ ಶಿಕ್ಷಕ ಹೇಳಿದ
"ನೀನು ಸಸಿಗಳಿಗೆ ಹೆಚ್ಚು ನೀರು ಗೊಬ್ಬರವನ್ನು ನೀಡಿದೆ, ಹೆಚ್ಚು ಕಾಳಜಿವಹಿಸಿದೆ ಆ ಕಾರಣ ಆ ಸಸಿಗಳಿಗೆ ಯಾವುದೇ ಜವಾಬ್ದಾರಿ ಸ್ವಪ್ರಯತ್ನದ ಅರಿವಾಗಲಿಲ್ಲ.. ಆದರೆ ನಾನು ಸ್ವಲ್ಪ ಪ್ರಮಾಣದಲ್ಲಿ ನೀರು ಗೊಬ್ಬರವನ್ನು ನೀಡಿದೆ, ಆ ಬೇರುಗಳು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಆಳಕ್ಕೆ ಮತ್ತು ಅಗಲವಾಗಿ ಹುಡುಕಾಟದಲ್ಲಿ ತಮ್ಮ ಸ್ಥಾನ ಭದ್ರ ಮಾಡಿಕೊಂಡವು. ಅದಕ್ಕಾಗಿ ಅವು ಯಾವುದೆ ಬಿರುಗಾಳಿ, ಮಳೆಗೆ ಬಗ್ಗದೆ ದೃಡವಾಗಿ ನಿಂತಿವು"....!
ಈ ಕಥೆಯ ಮೌಲ್ಯ ಇಷ್ಟೆ
ಪಾಲಕರು/ಶಿಕ್ಷಕರಿಗೆ ಮಕ್ಕಳು ಸಸಿಗಳಿದ್ದ ಹಾಗೆ.. ಎಲ್ಲವನ್ನೂ ಅವರಿಗೆ ಸುಲಭವಾಗಿ ನೀಡಿದರೆ ಅವರಿಗೆ ಪರಿಶ್ರಮದ ಬೆಲೆ ಗೊತ್ತಾಗುವುದಿಲ್ಲ.. ಅವರು ನಿರ್ವಹಿಸಬೇಕಾದ ಕಾಯಕಕ್ಕೆ ಗೌರವ, ಬೆಲೆ ನೀಡುವುದಿಲ್ಲ.. ಅವರಿಗೆ ಎಲ್ಲವನ್ನು ಸುಲಭವಾಗಿ ನೀಡುವ ಬದಲು ಮಾರ್ಗದರ್ಶನ ಮಾಡೋಣಾ.. ಸಲಹೆ ನೀಡೊಣಾ.. ಅವರಿಗೆ ನಡೆಯುವದನ್ನು ಕಲಿಸೋಣ...! 
ಇದೇ ರಚನಾವಾದ ಶಿಕ್ಷಣ

Wednesday, June 10, 2020

ಅರಮನೆ ಗುಡ್ಡದ ಕರಾಳ ರಾತ್ರಿಗಳು

ಪುಸ್ತಕ:- ಅರಮನೆ ಗುಡ್ಡದ ಕರಾಳ ರಾತ್ರಿಗಳು
ಲೇಖಕರು:- ಗಿರಿಮನೆ ಶ್ಯಾಮರಾವ್

ರೋಚಕ ಕತೆಗಳ ಜೊತೆಯಲ್ಲಿ ಪಶ್ಚಿಮ ಘಟ್ಟಗಳ ರಮಣೀಯ ಸೌಂದರ್ಯ ಮತ್ತು ಅಲ್ಲಿನ ನಿಗೂಢತೆಗಳ ಅನಾವರಣಗೊಳಿಸುವ "ಮಲೆನಾಡಿನ ರೋಚಕ ಕತೆಗಳು" ಎಂಬ ಕಾದಂಬರಿ ಸೀರಿಯಲ್ಲಿನ  ಭಾಗ-2 ಈ "ಅರಮನೆ ಗುಡ್ಡದ ಕರಾಳ ರಾತ್ರಿಗಳು" ಎಂಬ ಕೃತಿ..

ಪೇಟೆಯಿಂದ ಟ್ರಕ್ಕಿಂಗ್‌ಗೆ ಎಂದು ಮಲೆನಾಡಿನ ಪಶ್ಚಿಮಘಟ್ಟದ ಬೆಟ್ಟಗಳನ್ನು ಹತ್ತಲು ಬರುವ ನವ ಜೋಡಿಗಳು ಇಲ್ಲಿನ ಕಾನನದಲ್ಲಿ ದಿಕ್ಕು ತಪ್ಪಿ ಅಲೆಯುವುದು ಹಾಗೂ ಇಲ್ಲಿಂದ ಪಾರಾಗುವ ಕಥಾ ಹಂದರ ಈ ಕೃತಿಯಲ್ಲಿದೆ..

ಮಾಯ ಬೆಂಗಳೂರಿನ ನಿವಾಸಿ, ಸುಂದರಿ ಅಪ್ಸರೆಯಂತ ಹುಡುಗಿ ಹಾಗೂ ಟ್ರಕ್ಕಿಂಗ್ ಪ್ರಿಯೆ.. ಟ್ರಕ್ಕಿಂಗ್ ಟ್ರೂಪಿನಲ್ಲಿದ್ದ ಕೀರ್ತಿ ಎಂಬುವನನ್ನು ಪ್ರೀತಿಸಿ ಮದುವೆಯಾದಳು. ಇದೇ ಟ್ರೂಪಿನಲ್ಲಿದ್ದ ಇನ್ನೊಂದು ಜೋಡಿ ಶ್ರೀಕರ ಮತ್ತು ದೀಪ್ತಿ..
ಮಾಯ-ಕೀರ್ತಿ & ಶ್ರೀಕರ-ದೀಪ್ತಿ ನಾಲ್ವರು ಆತ್ಮೀಯ ಗೆಳೆಯರು ಹೌದು.ಗೆಳೆತನಕ್ಕೆ ಮುಖ್ಯ ಕಾರಣ ಟ್ರಕ್ಕಿಂಗ್ ಅಭಿರುಚಿ.ಇದೇ ಟ್ರಕ್ಕಿಂಗ್ ಮುಂದೆ ಅವರ ಜೀವಕ್ಕೆ ಕುತ್ತು ತಂದೊಡ್ಡತ್ತದೆ..!?
ಪೋಷಕರ ಸಮ್ಮತಿ ಇಲ್ಲದಿದ್ದರೂ ಅವರಿಗೆ ಬಲವಂತವಾಗಿ ಒಪ್ಪಿಸಿ ಈ ನವ ವಿವಾಹಿತ ಜೋಡಿಗಳು ಮಳೆಗಾಲದ ಸಮಯದಲ್ಲಿ ಮಲೆನಾಡ ಬೆಟ್ಟಗಳ ಟ್ರಕ್ಕಿಂಗ್ ಮಾಡುವ ಹುಚ್ಚು ಸಾಹಸಕ್ಕೆ ಕೈಹಾಕುತ್ತಾರೆ..
ಬೆಂಗಳೂರಿನ ಸುತ್ತಮುತ್ತಲಿನ ಸಣ್ಣ ಪುಟ್ಟ ಬೆಟ್ಟ ಹತ್ತಿಳಿದ ಇವರು ನಿಗೂಢವಾದ ಅಭೇಧ್ಯ ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ಹತ್ತಲು ಬರುತ್ತಾರೆ. ಇಲ್ಲಿನ ಮಳೆ ರುದ್ರ ನರ್ತನ ನೋಡಿಯೇ ನಡುಗಿ ಹೋಗತ್ತಾರೆ.
ಇಲ್ಲಿನ ಪರಿಸರ ಪ್ರಾಣಿಗಳು ಮಳೆ ಕಾಡುದಾರಿಗಳ ಬಗ್ಗೆ ಅನುಭವ ಇರುವವರನ್ನೇ ದಾರಿ ತಪ್ಪಿಸುವಂತಹ ಭಯಾನಕ ಅರಣ್ಯಪ್ರದೇಶ ಈ ಪಶ್ಚಿಮ ಘಟ್ಟಗಳದ್ದು.
ಕಾಡಿನಲ್ಲಿ ದಾರಿ ತಪ್ಪುವ ಇವರು ಇಲ್ಲಿ ನಾನಾ ರೀತಿಯ ಕಷ್ಟ ಅನುಭವಿಸುತ್ತಾರೆ.ಕಾಡಿನಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಹೊರಜಗತ್ತಿನಿಂದ ಕಳೆದೋಗುತ್ತಾರೆ.ಇತ್ತ ಮಕ್ಕಳ ದಾರಿ ಕಾಯುತ್ತಿದ್ದ ತಂದೆ ತಾಯಿಯ ಕಳವಳ ಹೇಳತೀರದ್ದು..
ಕಾಡಿನಲ್ಲಿ ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಕೊಳೆತ ಹಲಸಿನ ಹಣ್ಣು,ಹಕ್ಕಿ ಮೊಟ್ಟೆಗಳು, ಅಣಬೆ, ಕಾಡುಕೋಳಿಯ ಹಸಿಮಾಂಸ ತಿನ್ನುವ ಪರಿಸ್ಥಿತಿ ಬರುತ್ತದೆ. ಹೇಗೋ ಜೀವ ಉಳಿಯಿತು ಎಂದುಕೊಳ್ಳುವಷ್ಟರಲ್ಲಿ ಶ್ರೀಕರನ ಭೀಕರ ಸಾವು..!
ದೀಪ್ತಿಯ ಕಣ್ಣ ಮುಂದೆಯೇ ಸೀಳು ನಾಯಿಗಳು ಶ್ರೀಕರನನ್ನು ಕಚ್ಚಿ ತಿನ್ನುತ್ತವೆ, ಕಣ್ಣ ಮುಂದೆಯೇ ಗಂಡನ ಈ ಸ್ಥಿತಿ ಕಂಡ ದೀಪ್ತಿ ಅರೆ ಹುಚ್ಚಿಯಂತೆ ಕಾಡಿನಲ್ಲಿ ಅಲೆಯುತ್ತಾಳೆ.. ಕೊನೆಗೆ ಅರಮನೆಗುಡ್ಡ ಹತ್ತಿ ಮೊಬೈಲ್ನಿಂದ ತಮ್ಮ ಪೋಷಕರಿಗೆ ತಮ್ಮ ಪರಿಸ್ಥಿತಿಯನ್ನು ತಿಳಿಸುತ್ತಾರೆ. ಪಶ್ಚಿಮಘಟ್ಟಗಳಲ್ಲಿ ಇವರನ್ನು ಹುಡುಕುವ ಕಾರ್ಯ ಪ್ರಾರಂಭವಾಗುತ್ತದೆ. ಬೆಟ್ಟಗುಡ್ಡಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ಸ್ಥಳೀಯ ಸಿದ್ದರಾಜು
ಎಂಬುವನ ನೆರವನಿಂದ ಇವರನ್ನು ಕರೆತರಲು ಹೊರಡುತ್ತಾನೆ. ಸಿದ್ದರಾಜು ಗಾಢ ಕತ್ತಲಿನಲ್ಲೂ ಕಾಡಿನಲ್ಲಿ ದಾರಿ ಗುರುತಿಸಬಲ್ಲ ಹಾಗೂ ಇಲ್ಲಿನ ಪ್ರಾಣಿಗಳ ಬಗ್ಗೆ, ಗಿಡಮೂಲಿಕೆಗಳ ಬಗ್ಗೆ ತಿಳಿದಂತವನು. ಹುಚ್ಚಿಯಂತೆ ಅಲೆದು ಸತ್ತಳೆಂದೇ ಭಾವಿಸಿದ ದೀಪ್ತಿ ಸಿಗುವುದು ಮತ್ತು ಸೀಳು ನಾಯಿಗಳಿಂದ ಸತ್ತನೆಂದು ತಿಳಿದಿದ್ದ ಶ್ರೀಕರನ್ನು ಸಹ ಪವಾಡದಂತೆ ಬದುಕುಳಿಯುತ್ತಾನೆ.. ಇವರನ್ನು  ರಕ್ಷಿಸಿ  ಕಾಡಿನಿಂದ ಹೊರತರಲು ಸಿದ್ಧರಾಜು ಸಫಲನಾಗುತ್ತಾನೇ..? ಮಗ ಸತ್ತನೆಂದೇ ತಿಳಿದ ಶ್ರೀಕರನ ತಂದೆ ಏನು ಮಾಡುತ್ತಾನೆ ಎಂಬುದನ್ನು ಅರಿಯಲು ಕಾದಂಬರಿ ಓದಲೇ ಬೇಕು..
ಕೃತಿಯಲ್ಲಿ ಕತೆಯ ರೋಚಕತೆಯ ಜೊತೆ ಜೊತೆಯಲ್ಲಿ ಮಲೆನಾಡಿನ ಚಿತ್ರಣವನ್ನು,ಇಲ್ಲಿನ ಮಳೆಗಾಲದ ವೈಭವವನ್ನು ಹಾಗೂ ಕಾಡಿನಲ್ಲಿ ನಡೆಯುವ ಕೆಲವು ಅನಾಚಾರಗಳು ಹಾಗೂ ಅರಮನೆ ಗುಡ್ಡದ ವಿವರಣೆಯನ್ನು ತುಂಬಾ ಸುಂದರವಾಗಿ ಹೆಣೆಯಲಾಗಿದೆ..

Thursday, June 4, 2020

ರುದ್ರಪ್ರಯಾಗದ ಭಯಾನಕ ನರಭಕ್ಷಕ

ಪುಸ್ತಕ:- ರುದ್ರಪ್ರಯಾಗದ ಭಯಾನಕ ನರಭಕ್ಷಕ
ಮೂಲ ಲೇಖಕರು:- ಜಿಮ್ ಕಾರ್ಬೆಟ್
ಅನುವಾದಕರು:- ಪೂರ್ಣಚಂದ್ರ ತೇಜಸ್ವಿ

ಜಿಮ್ ಕಾರ್ಬೆಟ್‌ರವರ ಸಾಹಸ ಸತ್ಯಕಥೆ 'ರುದ್ರಪ್ರಯಾಗದ ನರಭಕ್ಷಕ' ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಖ್ಯಾತ ಕೃತಿಯಾಗಿದೆ. ಇಂತಹ ಶ್ರೇಷ್ಠ ಕೃತಿಯನ್ನು ಕನ್ನಡಿಸಿ ಕನ್ನಡ ಸಾಹಿತ್ಯಾಸಕ್ತರಿಗೆ ಊಣಬಡಿಸಿದ ಶ್ರೇಯಸ್ಸು ಪೂರ್ಣಚಂದ್ರ ತೇಜಸ್ವಿಯವರಿಗೆ ಸಲ್ಲುತ್ತದೆ.
ಹಿಮಾಲಯದ ತಪ್ಪಲಿನ ಪುಣ್ಯಕ್ಷೇತ್ರಗಳಾದ ಕೇದರನಾಥ,ಬದರೀನಾಥಗೆ ಹೋಗುವ ಮಾರ್ಗದಲ್ಲಿನ ಮಂದಾಕಿನಿ ಅಲಕನಂದಾ ನದಿಗಳ ಸಂಗಮ ಸ್ಥಳವೇ ಈ ರುದ್ರಪ್ರಯಾಗ.. ಹೀಗೆ ಸಂಗಮಗೊಂಡ ನದಿ ಮುಂದೆ ಗಂಗಾನದಿಯಾಗಿ ಹರಿಯುತ್ತದೆ..
ರುದ್ರಪ್ರಯಾಗದ ಸುತ್ತಮುತ್ತಲಿನ ಕಾಡಿನಲ್ಲಿ ವಾಸವಾಗಿದ್ದ ಚಿರತೆಯು ತನ್ನ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ನರಮನುಷ್ಯರನ್ನು ಕೊಲ್ಲಲು ಪ್ರಾರಂಭಿಸುತ್ತದೆ. ಹೀಗೆ ರುದ್ರಪ್ರಯಾಗ ಮತ್ತು ಕೇದಾರನಾಥ ಯಾತ್ರಾ ಮಾರ್ಗದ ಅನೇಕರನ್ನು ಕೊಂದು ತಿಂದ ಈ  ಚಿರತೆಯು "ರುದ್ರಪ್ರಯಾಗದ ನರಭಕ್ಷಕ" ಎಂದೇ ಪ್ರಸಿದ್ಧಿಯನ್ನು ಪಡೆಯಿತು.
ಚಿರತೆಗಳು ಸಾಮಾನ್ಯವಾಗಿ ಪ್ರಾಣಿಗಳನ್ನು ಬೇಟೆಯಾಡುವುದರ ಮೂಲಕ ಇಲ್ಲವೇ ಸತ್ತ ಪ್ರಾಣಿಗಳನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತವೆ. ಆದರೆ ಈ ಚಿರತೆಯು ನರ ಮಾನವರನ್ನು ಬೇಟೆಯಾಡಲು ಪ್ರಾರಂಭಿಸಿದ ಹಿನ್ನಲೆಗೆ ಮನುಷ್ಯನೇ ಕಾರಣನಾಗಿರುತ್ತಾನೆ..!?
ಈ ಚಿರತೆಯು ರುದ್ರಪ್ರಯಾಗದ ಸುತ್ತಮುತ್ತಲಿನ ಹಳ್ಳಿಯವರಲ್ಲಿ ಎಷ್ಟರಮಟ್ಟಿಗೆ ಭೀತಿಯನ್ನು ಹುಟ್ಟಿಸಿತು ಎಂದರೆ ಇದು ಚಿರತೆಯ ಕೆಲಸವಲ್ಲ ಪಿಶಾಚಿಯ ಕೆಲಸ ಎಂದೇ ಜನರು ನಂಬಿದ್ದರು..

ರುದ್ರಪ್ರಯಾಗದ ನರಭಕ್ಷಕನ ಮೊದಲ ನರಬಲಿ ಸರ್ಕಾರಿ ದಾಖಲೆಗಳ ಪ್ರಕಾರ 1918 ಜೂನ್ 9 ನೇ ತಾರೀಕು.ಇದರ ಕೊನೆಯ ನರಬಲಿ 1924 ಏಪ್ರಿಲ್ 14.. ಈ ಕಾಲಾವಧಿಯಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರ ಈ ನರಭಕ್ಷಕ ಕೊಂದು ತಿಂದಿರುವ ಮನುಷ್ಯರು ಒಟ್ಟು 124.. ದಾಖಲೆಗಳೇ ಇಲ್ಲದೆ ಅದೆಷ್ಟೋ ಜನರನ್ನು ಮತ್ತು ಪ್ರಾಣಿಗಳನ್ನು ಇದು ಬಲಿ ಪಡೆದಿತ್ತು..
ಈ ನರಭಕ್ಷಕ ಚಿರತೆಯ ಕಾರ್ಯಕ್ಷೇತ್ರ ರುದ್ರಪ್ರಯಾಗ ಒಳಗೊಂಡಂತೆ ಸುಮಾರು ಐದುನೂರು ಚದುರ ಮೈಲು ಪ್ರದೇಶವನ್ನು ಹೊಂದಿತ್ತು. ಇದರಲ್ಲಿ ಬರುವ ಹತ್ತಾರು ಹಳ್ಳಿಗಳಲ್ಲಿ ಇದು ನರ ಬೇಟೆಯನ್ನು ಮಾಡುತ್ತಿತ್ತು.
ಸರ್ಕಾರ ಎಷ್ಟೇ ಪ್ರಯತ್ನವನ್ನು ಪಟ್ಟರೂ ಸಹ ಈ ಚಿರತೆಯನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ ಕಾರಣ ಇದರ ವಿಶಾಲ ಕಾರ್ಯಕ್ಷೇತ್ರವಾಗಿತ್ತು.
ನೈನಿತಾಲ್‌ನಲ್ಲಿ ವಾಸವಾಗಿದ್ದ ಜಿಮ್ ಕಾರ್ಬೆಟ್ ತನ್ನ ಮಿತ್ರರೊಡನೆ ಸೇರಿ ಹೇಗಾದರೂ ಮಾಡಿ ನರಭಕ್ಷಕನನ್ನು ಬೇಟೆಯಾಡಲು ನಿರ್ಧರಿಸುತ್ತಾರೆ. ಚಿರತೆ ಎಷ್ಟು ಚಾಣಾಕ್ಷತೆ ಹೊಂದಿತ್ತು ಎಂದರೆ ಹಲವು ಶಿಕಾರಿ ಮಾಡುವವರಿಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಗುತ್ತಿತ್ತು..

ಈ ನರಭಕ್ಷಕನನ್ನು ಕೊಲ್ಲುವ ಉದ್ದೇಶದಿಂದ ಜಿಮ್ ಕಾರ್ಬೆಟ್ ರುದ್ರಪ್ರಯಾಗದ ಸುತ್ತಮುತ್ತಲಿನ ಕಾಡಿನಲ್ಲಿ ನೂರಾರು ಮೈಲಿಗಳನ್ನು ಸುತ್ತುತ್ತಿದ್ದರು. ಚಿರತೆಯು ಕೊಂದು ತಿಂದು ಉಳಿದುಬಿಟ್ಟ ಪ್ರಾಣಿ,ಮನುಷ್ಯರ ದೇಹದ ಬಳಿಯಲ್ಲಿ ಮಚಾನು (ಬೇಟೆಯಾಡಲು ಅಡಗಿ ಕುಳಿತುಕೊಳ್ಳವ ಸ್ಥಾನ) ಕಟ್ಟಿಕೊಂಡು ಹಲವಾರು ರಾತ್ರಿಗಳನ್ನು ನಿದ್ದೆ ಇಲ್ಲದೆ ಚಿರತೆಗಾಗಿ ಕಾಯುತ್ತಿದ್ದರು. ಪ್ರತಿಸಲವೂ ನಿರಾಸೆ ಉಂಟಾಗುತ್ತಿತ್ತು. ಚಿರತೆಯ ಅದೃಷ್ಟವೋ ಅಥವಾ ಕಾರ್ಬೆಟ್‌ರ ದುರಾದೃಷ್ಟವೋ
ಚಿರತೆಯನ್ನು ಕೊಲ್ಲಲು ಜಿನ್ ಕತ್ತರಿಯನ್ನು,ಸೈನಾಡ್ ಪಾಷಣವನ್ನೂ ಹೀಗೆ ನಾನಾ ಪ್ರಯತ್ನಪಟ್ಟರೂ ಪ್ರತಿ ಬಾರಿ ಚಿರತೆ ತನ್ನ ಚಾಣಾಕ್ಷತನದಿಂದ ಪಾರಾಗಿ ನರಬೇಟೆ ಮುಂದುವರೆಸುತ್ತಿತ್ತು..

ಕೊನೆಗೆ ಯಾವ ರೀತಿ ಚಿರತೆಯನ್ನು ಕೊಂದು ಜನರಿಗೆ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ನೆರವು ಮಾಡಿದರು ಎಂಬ ರೋಚಕ ಘಟನೆಗಳನ್ನು ಪುಸ್ತಕ ಓದಿಯೇ ಸವಿಯಬೇಕು..

ನೂರಾರು ಜನರನ್ನು ಕೊಂದು ತಿಂದ ಚಿರತೆಯ ಅಂತ್ಯವಾದಾಗ ನನಗೆನ್ನಿಸಿದ್ದು ಅದು ಮಾಡಿದ ಒಂದೇ ತಪ್ಪೆಂದರೆ ತನ್ನ ಆಹಾರವನ್ನು ಪ್ರಾಣಿಗಳ ಮಾಂಸದಿಂದ ಮನುಷ್ಯರ ಮಾಂಸಕ್ಕೆ ಬದಲಿಸಿಕೊಂಡಿದ್ದು ಮಾತ್ರ..