ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Thursday, October 6, 2022

ಕಾಂತಾರದಲ್ಲಿ ಕಂಡಿದ್ದು..

 

'ಕಾಂತಾರ ಒಂದು ದಂತಕಥೆ'


ವಿಮರ್ಶೆಯಲ್ಲ; ವಿವೇಚನೆ ಅಷ್ಟೆ..?!


ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ ಸಿನಿಮಾ. ಅದ್ಭುತ ಪ್ರದರ್ಶನ ಕಾಣುತ್ತಾ ಜನಮನ್ನಣೆ ಗಳಿಸುತ್ತಿರುವುದು ಹೆಮ್ಮೆಯ ವಿಚಾರ.. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾದ ಕ್ಲೈಮಾಕ್ಸ್ ಬಗ್ಗೆ ರಿಷಬ್ ಅವರ ಅಭಿನಯದ ಬಗ್ಗೆ ಭಾರಿ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಸಿನಿಮಾದಲ್ಲಿ ನನಗೆ ಇಷ್ಟವಾದದ್ದು ಸಿನಿಮಾದ ಕಥಾವಸ್ತು ಹಾಗೂ ಅದನ್ನು ತೋರಿಸುವ ರೀತಿ..  ಸಿನಿಮಾದಲ್ಲಿ ಒಂದೊಳ್ಳೆ ಸಂದೇಶವಿದೆ ಅದೇನೆಂದರೆ ದುಷ್ಟರ ಸಂಹಾರ ಶಿಷ್ಟರ ರಕ್ಷಣೆ, ದೈವ (ದೇವರು) ಒಳ್ಳೆಯವರನ್ನು ಕೈ ಬಿಡುವುದಿಲ್ಲ ಎನ್ನುವುದು... 


 ಸಿನಿಮಾದಲ್ಲಿ ಯಾರು ದುಷ್ಟರು ಯಾರು ಒಳ್ಳೆಯವರು ??

ಕೇವಲ ಮೇಲ್ನೋಟಕ್ಕೆ ಒಳ್ಳೆಯವರ ರೀತಿ ನಟಿಸುವುದರಿಂದ ಪ್ರಯೋಜನವಿಲ್ಲ ಎಂಬುದು ಸಾಹುಕಾರನ ಪಾತ್ರದಿಂದ ಕಾಣಬಹುದು.‌ ಸಾಹುಕಾರ ದೈವದ ಆಚರಣೆಗೆ ಹಣದ ಸಹಾಯ ಮಾಡುತ್ತಾನೆ ಹಾಗೂ ಊರಿನ ಜನರಿಗೂ ಸಹ ನೆರವಾಗುತ್ತಾನೆ. ಆದರೆ ಅವನ ಉದ್ದೇಶ ಕೆಟ್ಟದಾಗಿರುತ್ತದೆ. ಸಿನಿಮಾದ ಕೊನೆಯಲ್ಲಿ ಅವನ ಅಂತ್ಯ ಕಾಣುತ್ತೇವೆ..

ಸಿನಿಮಾದಲ್ಲಿ ಇನ್ನೊಂದು ಪಾತ್ರ ಅರಣ್ಯಾಧಿಕಾರಿ ಮುರುಳಿ ಎಂಬುದು.. ಇವನು ಮೇಲ್ನೋಟಕ್ಕೆ ಒರಟು, ಊರ ಜನರ ವಿರೋಧಿ ಹಾಗೂ ದೈವದ ಆಚರಣೆಗಳನ್ನು ನಿಲ್ಲಿಸುವ ಬೆದರಿಕೆಯನ್ನೂ ಹಾಕುತ್ತಾನೆ. ಆದರೆ ಇವನ ಉದ್ದೇಶ ಒಳ್ಳೆಯದಾಗಿರುತ್ತದೆ..

ದೇವರ ಆಚರಣೆ ಭೂತ ಕೋಲಕ್ಕೆ ಹಣ ನೀಡುವ ಸಾಹುಕಾರನ ಉದ್ದೇಶ ಕೆಟ್ಟದ್ದು; ಅದೇ ಕೋಲ ನಿಲ್ಲಿಸುತ್ತೇನೆ ಎನ್ನುವ ಅಧಿಕಾರಿಯ ಉದ್ದೇಶ ಒಳ್ಳೆಯದ್ದು..


ದೇವರು ಶಿಷ್ಟರನ್ನು ರಕ್ಷಿಸುತ್ತಾನೆ ಎನ್ನುವುದನ್ನು ಸಿನಿಮಾದುದ್ದಕ್ಕೂ ಕಾಣಬಹುದು. ಅರಣ್ಯಾಧಿಕಾರಿಯ ಕಾರಿನ ಮೇಲೆ ಮರ ಬೀಳುತ್ತದೆ ಆದರೆ ಅವನಿಗೆ ಅಂತಹ ಅಪಾಯವೇನು ಆಗುವುದಿಲ್ಲ. ಮತ್ತೊಂದು ಸನ್ನಿವೇಶದಲ್ಲಿ ಮುರುಳಿಯ ಕೈಯಿಂದ ಹಾರಿದ ಬಂದೂಕಿನ ಗುಂಡು ಹಿಮ್ಮುಖವಾಗಿ ಸಿಡಿದರೂ ಸಹ ಅವನು ಪ್ರಾಣಾಪಾಯದಿಂದ ಪಾರಾಗುತ್ತಾನೆ. ಇವೆಲ್ಲಾ ದೃಶ್ಯಗಳು ಒಳ್ಳೆಯವರನ್ನು ದೇವರು ಕಾಯುವನು ಅನ್ನುವುದಕ್ಕೆ ಸಾಕ್ಷಿ.. 

 ಸಿನಿಮಾದ ಕೊನೆಯಲ್ಲಿ ದೈವ ಸ್ವತಃ ಮುರುಳಿಯನ್ನು ನಮಸ್ಕರಿಸಿ ತಬ್ಬಿಕೊಳ್ಳವುದು ತೋರಿಸಲಾಗಿದೆ.. ನೀನು ದೇವರಿಗೆ ದೇಣಿಗೆ ಬಲಿ ಕೊಡುವುದು ಉದ್ದಂಡ ಬೀಳುವುದು ಮುಖ್ಯವಲ್ಲ ಬದಲಾಗಿ ನೀ ಮಾಡುವ ಕೆಲಸ ಹಾಗೂ ಅದರ ಹಿಂದಿನ ಉದ್ದೇಶ ಒಳ್ಳೆಯದಾಗಿರಬೇಕು ಎಂದು ಸಿನಿಮಾ ಸಂದೇಶ ಕೊಡುತ್ತದೆ..  ಕಥೆ ಹಾಗೂ ಅದನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ತೋರಿಸುವ ಕಲೆ ಶೆಟ್ರಿಗೆ ಕರಗತವಾಗಿದೆ, ಅದೇ ಕಾರಣಕ್ಕಾಗಿ ಪರಭಾಷಿಕರು ಸಹ ಸಿನಿಮಾ ನೋಡಿ ಹಾಡಿ ಹೊಗಳುತ್ತಿದ್ದಾರೆ.. ಬೇಗ ನೀವೂ ನೋಡಿ..

Monday, October 3, 2022

ಅವಳೇ...‌

ಹೌದು ಮತ್ತೊಮ್ಮೆ ಆ ಹುಡುಗಿಯ ಬಗ್ಗೆಯ ಬರೆಯುವ ಮನಸ್ಸಾಗಿದೆ. ಇವಳೂ ಅವಳೆ, ಅದೇ ಕಾಲೇಜಿನ ಅಪ್ಸರೆ.. ಜಡಿಮಳೆ.. ಕರಿಸೀರೆ.. ಲೈಬ್ರೆರಿ.. ನೆನಪಾಯಿತೇ..

ಕಾಲೇಜಿನಲ್ಲಿ ನಮ್ಮದೊಂದು ಗ್ಯಾಂಗ್. ಗ್ಯಾಂಗ್ ಅಂದರೆ ಸಾಮಾನ್ಯದಲ್ಲ; ಗುಂಪಿನಲ್ಲಿದ್ದದ್ದು ಐವರು.. ಇಡೀ ಕಾಲೇಜಿನಲ್ಲಿ ಪೋಲಿ,ಟಪೋರಿಗಳು ಎಂದು ಹೆಸರು ಪಡೆದವರು. ಪ್ರತಿದಿನ ಕಾಲೇಜಿಗೆ ಲೇಟು;ಏಕೆ ತಡವೆಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಲೆಕ್ಚರ್‌ಗೇ ಮಾತಿನ ತಿರುಗೇಟು ಕೊಡುವವರು.. ಕಾಲೇಜಿನಲ್ಲಿ ನಮ್ ಗ್ಯಾಂಗ್‌ನ ಹಾವಳಿ ಎಷ್ಟಿತ್ತೆಂದರೆ ಕಾಲೇಜಿನ ಘನತೆ ಗೌರವಕ್ಕೆ ದಕ್ಕೆ ತರುತ್ತಿರುವ ಕಾರಣದಿಂದ ಇವರನ್ನು ಕಾಲೇಜಿನಿಂದ ಹೊರದೂಡುವ ಬಗ್ಗೆ ನೋಟಿಸ್ ಬೋರ್ಡ್‌ನಲ್ಲಿ ನಮ್ಮ ಹೆಸರುಗಳು..‌ ಆ ವರ್ಷದ ಬ್ಯಾಚ್‌ನಲ್ಲಿನ ವಿದ್ಯಾರ್ಥಿಗಳಲ್ಲಿಯೇ ಮೊದಲು ನೌಕರಿ ಗಿಟ್ಟಿಸಿಕೊಂಡು ಕಾಲೇಜಿನ ಘನತೆ ಉಳಿಸಿದವರೂ ಸಹ ನಾವೇ… ನಮ್ಮ ಗ್ಯಾಂಗ್‌ನಲ್ಲಿರುವರೆಲ್ಲಾ ಯುವರಾಜರು, ಕಿಲಾಡಿಗಳು,ಪ್ರವೀಣರೂ,ಪ್ರಶಾಂತ ಸ್ವಭಾವದವರು ಜೊತೆಗೆ ನನ್ನಂತ ಸುನಾಮಿ… ಇದೇನು ಅವಳ ಬಗ್ಗೆ ಹೇಳ್ತೀನಿ ಅಂತ ಹೇಳಿ ಯಾವುದೋ ಗ್ಯಾಂಗ್ ಬಗ್ಗೆ ಹೇಳುತ್ತಿದ್ದಾನೆ ಎನ್ನುತ್ತಿದ್ದಿರಾ.. ನಾನು ಕಾಲೇಜಿನಲ್ಲಿ ಹೇಗಿದೆ ಎನ್ನಲು ಇದೊಂದು ಪೀಠಿಕೆ ಅಷ್ಟೇ. ನಮ್ ಜೊತೆ ಹುಡಗರೇ ಮಾತಾಡಲೂ ಭಯಪಡುವಾಗ ಪಾಪ ಅವಳಿಗೆ ಹೇಗೆ ಧೈರ್ಯ ಬಂದೀತು..  ನಮ್ಹುಡಗರ ಬಗ್ಗೆ ಮತ್ತೊಮ್ಮೆ ಬರೆಯುವೆ..


ಕಾಲೇಜಿನಲ್ಲಿ ದಿನಗಳು ಉರುಳಿ ಕೊನೆಗೆ ಪ್ರಿಪರೇಟರಿ ಪರೀಕ್ಷೆ ಬಂದಂತ ಸಮಯ.. ನನಗೆ ಪ್ರತಿದಿನ ಅವಳನ್ನು ನೋಡುವುದೇ ಒಂದು ಕಾಯಕವಾಗಿತ್ತು ಒಮ್ಮೆಯೂ ಮಾತಾಡಿರಲ್ಲಿಲ್ಲ, ನಿಜ ಒಪ್ಪಿಕೊಳ್ಳುವೆ ನನ್ನಲ್ಲೂ ಭಯವಿತ್ತು.. ನಾ ಅವಳಿಗಾಗಿ ನೋಡುವುದು ಅವಳಿಗೆ ಗೊತ್ತಿದೆಯೋ ಇಲ್ಲಯೋ ಅದೂ ಕನ್ಫರ್ಮ್ ಇರಲ್ಲಿಲ್ಲ.. ಪರೀಕ್ಷೆಯ ದಿನ ಅವಳು ಓದುತ್ತಾ ಕುಳಿತುಕೊಂಡಿದ್ದಳು. ನಾನು ಅವಳನೇ ನೋಡುತ್ತಾ ಕುಳಿತ್ತಿದ್ದೆ.. ಆಹಾ ಎಂತಹ ಚೆಲುವೆ ಅವಳು, ನನಗಿಂತ ತುಸು ಎತ್ತರವೇ ಎನ್ನುವಂತೆ ತೆಳು ಮೈಯ ಸುಂದರಿ ಅವಳು.. ಆ ಹಾಳು ನೀಲಿ ಸಮವಸ್ತ್ರದಲ್ಲಿಯೂ ಇವಳು ದೇವಲೋಕದ ಅಪ್ಸರೆ ಅಂತೆ ಕಾಣುತ್ತಿದ್ದಳು. ಸದಾ ನನ್ನನ್ನೇ ಹುಡುಕುವಂತಿತ್ತು ಅವಳ ಕಣ್ನೋಟ. ಬಟ್ಟಲುಗಣ್ಣಿನ ಚೆಲುವೆಯ ದೊಡ್ಡದಾದ ಹಾರ್ಟ್ ಶೇಪಿನ ಕಿವಿಯೋಲೆಗಳು ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು. ನಾನು ಅವಳನ್ನೇ ನೋಡುತ್ತಾ ಅವಳ ಮುಗ್ಧ ಮುಖದಲ್ಲಿ ಮುಳುಗಿದ್ದೆ.. ಅವಳು ನಾ ನೋಡುವ ಅರಿವಿಲ್ಲದೆ ಓದುತ್ತಿದ್ದಳು. ಅದೇ ಸಮಯಕ್ಕೆ ನಮ್ಮ ಗ್ಯಾಂಗ್‌ನವರು 'ಬೇಗಾ ಬಾರೋ' ಎಂದು ನನ್ನ ಹೆಸರಿನಿಂದ ಕೂಗಿದರು. ಹೆಸರು ಕೇಳಿ ಅವಳು ನನ್ನನ್ನು ಹುಡುಕುವಂತೆ ಅತ್ತಿತ್ತ ನೋಡುತ್ತಿದ್ದಳು. "ಏನ್ರೋ ನಿಮ್ ಗೋಳು ನೆಮ್ಮದಿಯಾಗಿ ನನ್ ಹುಡ್ಗಿಗೆ ನೋಡಲೂ ಸಹ ನೀವು ಬಿಡುವುದಿಲ್ಲ" ಎಂದ್ಹೇಳುತ್ತಾ ಕೂಗಿದೆ.. ನನ್ನ ಧ್ವನಿ ಕೇಳಿದ ತಕ್ಷಣ ನನ್ನೆಡೆಗೆ ನೋಡಿದಳು.. ಆ ಕ್ಷಣದ ಅವಳ ಮುಖ ಭಾವನೆ ಈಗಲೂ ನನಗೆ ಚೆನ್ನಾಗಿ ನೆನಪಿದೆ.. ಇವನು "ನನ್ ಹುಡ್ಗಿ" ಎಂದಿದ್ದು ನನಗೆಯೇ! ಎಂದು ಆಶ್ಚರ್ಯ,ಭಯದಿಂದ ನೋಡುತ್ತಿದ್ದಳು ಅವಳು..

ಜೊತೆಯಲ್ಲಿ ಖುಷಿಯೂ ಇತ್ತೆನೋ….??!!!

Sunday, October 2, 2022

ಕಾಂತಾರ


 "ಕಾಂತಾರ ಒಂದು ದಂತಕಥೆ" ಕನ್ನಡ ನಾಡಿನ ಮಣ್ಣಿನ ಸೊಗಡನ್ನು ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾ. ಮನುಷ್ಯ ಮತ್ತು ಕಾಡಿನ ನಡುವಿನ ಬಾಂದವ್ಯ ಹಾಗೂ ದೈವದ ಮಹತ್ವ ಇವುಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ದಕ್ಷಿಣ ಕರ್ನಾಟಕದ ಆಚರಣೆಗಳು,ಕಂಬಳ, ಇಲ್ಲಿಯ ದೈವಾರಾಧನೆ ಪಂಜುರ್ಲಿ, ಭೂತ ಕೋಲ ಮುಂತಾದ ವಿಚಾರಗಳನ್ನು ಪರಿಚಯಿಸುವ "ಕಾಂತಾರ" ಕನ್ನಡ ಸಿನಿರಂಗದ ಅತ್ಯುತ್ತಮ ಸಿನಿಮಾಗಳ ಸಾಲಿನಲ್ಲಿ ಬರುವ ಚಿತ್ರ. ರಿಷಬ್ ಶೆಟ್ಟಿ ಅವರು ಅಭಿನಯ ನಿರ್ದೇಶನಕ್ಕೆ ಖಂಡಿತವಾಗಿ ಮನಸ್ಸೋಲುತ್ತದೆ.. 

ಕನ್ನಡ ಸಿನಿಮಾದ RRR ಅಂದರೆ ರಕ್ಷಿತ್,ರಿಷಬ್,ರಾಜ್ ಶೆಟ್ಟಿ.. ಕಡಲ ತೀರದಿಂದ ಬಂದ ಈ ಪ್ರತಿಭೆಗಳು ಪ್ರಪಂಚದ ಸಿನಿರಸಿಕರನ್ನು ಕನ್ನಡ ಸಿನಿಮಾದ ಕಡೆ ನೋಡುವಂತೆ ಮಾಡಿದ್ದಾರೆ..

ಕಾಂತಾರ ಸಿನಿಮಾದಲ್ಲಿ ಬರುವ 'ಶಿವ'(ರಿಷಬ್) ತನ್ನ ಗಣದೊಂದಿಗೆ ಮೋಜು ಮಸ್ತಿಯಲ್ಲಿರುವ ವ್ಯಕ್ತಿ..‌ ಶಿಕಾರಿ ಸಾಹುಕಾರನ ಚಾಕರಿ ಇವನ ಕೆಲಸ.. ಕೈಲಾಸದಲ್ಲಿ ಇವನ ಆವಾಸ.. ಕಾಡಿಗೆ ಹೊಂದಿಕೊಂಡಿರುವ ಕರಾಡಿ ಇವರೂರು. ಶಿವನಿಗೊಬ್ಬಳು ಲೀಲಾ,‌ಇವರಿಬ್ಬರ ಶಿವಲೀಲೆ.. 

ಕಾಡಿನ ರಕ್ಷಣೆಗೆ ಬರುವ ಪ್ರಾಮಾಣಿಕ ಅರಣ್ಯಾಧಿಕಾರಿ ಮುರುಳಿ(ಕಿಶೋರ್)..‌ ಇವನು ಊರಿನ ಜನರಿಂದಾದ ಕಾಡಿನ ಒತ್ತುವಳಿಯನ್ನು ವಿರೋಧಿಸಿ ಕಾಡು, ಕಾಡಿನ ಸಂಪತ್ತಿನ ಉಳಿವಿಗಾಗಿ ಹೋರಾಡುವನು..

ಕಥೆ ಕೇಂದ್ರ ತುಳುನಾಡಾಗಿರುವುದರಿಂದ ಇಲ್ಲಿ ಕಂಬಳ ನೋಡಬಹುದು,ಹಾಗೂ ಅಲ್ಲಿನ ಜನರ ದೈವದ ನಂಬಿಕೆ ಭೂತಕೋಲ ಹಾಗೂ ಪಂಜುರ್ಲಿಯ ದೃಶ್ಯಗಳು ಮೈ ರೋಮಗಳು ನೆಟ್ಟಗಾಗಿಸುತ್ತವೆ..

ಉಳಿದವರು ಕಂಡಂತೆ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರ ಹುಲಿ ಕುಣಿತ;

ಗರುಡಗಮನ ವೃಷಭವಾಹನ ಸಿನಿಮಾದಲ್ಲಿ ರಾಜ್ ಶೆಟ್ಟಿಯವರು ಶಿವ ತಾಂಡವ;

ಕಾಂತಾರದಲ್ಲಿ ರಿಷಬ್ ಅವರ ಕೋಲ ದೈವಾರಾಧನೆ ನೋಡಿದರೆ ಮುಖಸ್ಮಿತರಾಗುವುದು ಖಚಿತ.. ಸಿನಿಮಾದ ಕ್ಲೈಮಾಕ್ಸ್‌ನಲ್ಲಿ ರಿಷಬ್ ಅವರ ಅಭಿನಯ ಸಿನಿಮಾವನ್ನು ಮತ್ತೊಂದು ಸ್ತರಕ್ಕೇರಿಸುತ್ತದೆ.. ಧರ್ಮೋ ರಕ್ಷತಿ ರಕ್ಷಿತಃ  ಎಂಬಂತೆ ನಾಡು ನುಡಿ ಸಂಪ್ರದಾಯಗಳಿಗಾಗಿ ಹೋರಾಡುವವರ ಜೊತೆ ದೈವವಿರುವುದು ಎಂಬ ಸಂದೇಶ ನೀಡುತ್ತದೆ..


ಶಟ್ರು ಮತ್ತೊಮ್ಮೆ ತಮ್ಮ ಸಿನಿಮಾ ಮತ್ತು ಕತೆಯಿಂದ ತಮ್ಮಲ್ಲಿರುವ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.. ಇಂತಹ ಹಲವು ಚಿತ್ರಗಳ ತಮ್ಮಿಂದ ಬರಲಿ ಅಂತ ನಿರೀಕ್ಷಿಸುತ್ತಾ, ಮುಂದಿನ ಸಿನಿಮಾಕ್ಕೆ ಶುಭವಾಗಲಿ..

ಸಿನಿಮಾ ನೋಡಿಲ್ಲ ಎಂದರೆ ದಯವಿಟ್ಟು ಥಿಯೇಟರ್‌ಗೆ ಹೋಗಿ ನೋಡಿ.. ಅದ್ಭುತವಾಗಿ..


#kantara #RishabShetty #HombaleFilms #ಕಾಂತಾರ