ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Sunday, May 28, 2023

ಬರ್ಮುಡಾ ಟ್ರ್ಯಾಂಗಲ್

 ಪುಸ್ತಕ:- ಬರ್ಮುಡಾ ಟ್ರ್ಯಾಂಗಲ್ಲೇ

ಲೇಖಕರು:- ಪ್ರದೀಪ ಕೆಂಜಿಗೆ


ಪುಸ್ತಕದ ಬಗ್ಗೆ ಮಾತಾನಾಡುವ ಮುನ್ನ ಶ್ರೀಯುತ ಪ್ರದೀಪ್ ಕೆಂಜಿಗೆ ಅವರ ಪರಿಚಯ ಮಾಡಲೇ ಬೇಕು‌‌‌..‌ ಇವರು ಚಿಕ್ಕಮಗಳೂರಿನ ಮೂಡಿಗೆರೆ ಸಮೀಪದ ಕೆಂಜಿಗೆ ಅನ್ನೋ ಊರಿನವರು.. ಮೂಡಿಗೆರೆ ಅಂದಕ್ಷಣ ನೆನಪಾಗೋದು ತೇಜಸ್ವಿ ಅವರು.. ಪ್ರದೀಪ್ ಕೆಂಜಿಗೆ ಅವರು ಕಾಫಿ ತೋಟದ ಕೃಷಿಯ ಜೊತೆ ಸಾಹಿತ್ಯ ಕೃಷಿ ಮಾಡಿ ಜನಪ್ರಿಯ ಗಳಿಸಿದವರು.. ಜಗತ್ತಿನ ಪ್ರಸಿದ್ಧ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರ ನೀಡಿದ್ದು ಇವರ ಕೀರ್ತಿ..

ತೇಜಸ್ವಿ ಅವರು ಜೊತೆಗೂಡಿ ಬರೆದ ಪ್ಯಾಪಿಲಾನ್ ಪುಸ್ತಕ ಸರಣಿಗಳಂತು ಅದ್ಭುತವಾಗಿದೆ.. ಪ್ಯಾಪಿ ಹೆಸರು ಕೇಳಿದಕ್ಷಣ ರೋಮಗಳೆಲ್ಲಾ ನೆಟ್ಟಗಾಗುತ್ತವೆ.. ಪ್ಯಾಪಿಲಾನ್ ಪುಸ್ತಕ ಮೂರು ಭಾಗಗಳಲ್ಲಿ ಪ್ರಕಟವಾಗಿದೆ. ಮೊದಲೆರಡು ಪುಸ್ತಕಗಳನ್ನು ತೇಜಸ್ವಿ ಅವರೇ ಅನುವಾದಿಸಿದ್ದಾರೆ ಆಗ ಪ್ರದೀಪ್ ಅವರ ಸಹಾಯಕರಾಗಿದ್ದರು. ಮೂರನೇ ಪುಸ್ತಕದ ವೇಳೆಗೆ ತೇಜಸ್ವಿ ನಮ್ಮನ್ನು ಅಗಲಿದಾಗ ಪ್ರದೀಪ್ ಕೆಂಜಿಗೆ ಅವರೇ ಮೂರನೇ ಪುಸ್ತಕವನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ಆ ಪುಸ್ತಕಗಳಂತು ಅದ್ಭುತವಾಗಿವೆ..‌


" ಬರ್ಮುಡಾ ಟ್ರಿಯಾಂಗಲ್  " ಇದು ಜಗತ್ತಿನ ಅತ್ಯಂತ ನಿಗೂಢ ರಹಸ್ಯಮಯ ಸ್ಥಳಗಳಲ್ಲಿ ಒಂದಾಗಿತ್ತು. ಈ ಸ್ಥಳಗಳಲ್ಲಿ ಜರುಗಿದ ವಿಸ್ಮಯಕಾರಿ ಘಟನೆಗಳನ್ನು ಬೇರೆ ಬೇರೆ ಭಾಷೆಗಳಿಂದ ಸಂಗ್ರಹಿಸಿ ಸರಳ ಸುಲಲಿತ ಕನ್ನಡ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದಾರೆ.. 

ಬರ್ಮುಡಾ ಅಥವಾ ಡೆವಿಲ್ಸ್ ಟ್ರ್ಯಾಂಗಲ್ ಎನ್ನುವ ಈ ಸಮುದ್ರ ಪ್ರದೇಶ ಅಮೆರಿಕದ ಅಟ್ಲಾಂಟಿಕ್ ತೀರದಲ್ಲಿ ಬರ್ಮುಡಾ, ಮಯಾಮಿ,ಫ್ಲೋರಿಡಾ, ಸಾನ್ ಜುವಾನ್,ಪೋರ್ಟೋರಿಕೋ ದೇಶಗಳ ನಡುವಿನ ತ್ರಿಕೋನ ಪ್ರದೇಶ.. ಇಲ್ಲಿ ಜರುಗಿದ ವಿಸ್ಮಯಕಾರಿ ಘಟನೆಗಳಿಂದ ಈ ಸ್ಥಳಕ್ಕೆ "ಡೆವಿಲ್ಸ್ ಟ್ರ್ಯಾಂಗಲ್", "ಟ್ರ್ಯಾಂಗಲ್ ಆಫ್ ಡೆತ್", "ಅಟ್ಲಾಂಟಿಕ್ ಸಾಗರದ ರುದ್ರಭೂಮಿ" ಎಂದೂ ಸಹ ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರವೇ ನೂರು ವಿಮಾನಗಳು, ಹಡಗುಗಳು ಯಾವ ಸುಳಿವನ್ನೂ ನೀಡದೇ ಮಾಯವಾಗಿವೆ. ದಾಖಲೆ ಇಲ್ಲದ ಪ್ರಕರಣಗಳೆಷ್ಟೋ…

ಇಲ್ಲಿ ಮಾಯವಾದ ಹಡಗುಗಳು ವಿಮಾನಗಳು ತಾವು ಮಾಯವಾಗುವ ಮುನ್ನ ಕಾಂಪಾಸ್ ಮುಳ್ಳು ಗಡಿಯಾರದಂತೆ ತಿರುಗುವುದಾಗಿ, ಆಕಾಶ ಹಳದಿಯಾಗುತ್ತಿದೆಯೆಂದೋ, ಸಮುದ್ರ ಸಾಮಾನ್ಯದಂತಿಲ್ಲವೆಂದು, ಅರ್ಥವಾಗದ ರೆಡಿಯೋ ಸಂಕೇತಗಳನ್ನು ಕಳಿಸಿ ನಾಪತ್ತೆಯಾಗಿದ್ದಾರೆ..




ಬರ್ಮುಡಾ ಟ್ರ್ಯಾಂಗಲ್‌ನ  ಅದೃಶ್ಯವಾಗುವ ಪ್ರಕರಣಗಳ ಬಗ್ಗೆ ನಾನಾ ತರಹದ ಸಿದ್ದಾಂತ,ವಿವರಣೆ ಕೊಟ್ಟಿದ್ದಾರೆ. ಇಲ್ಲಿನ ಸಾಗರದಲ್ಲಿ ಏಳುವ ದೈತ್ಯಾಕಾರದ ಅಲೆಗಳು ಹಡಗುಗಳ ನಾಶಕ್ಕೆ ಕಾರಣವಾಗಿರಬಹುದು. ಸಮುದ್ರದ ರಾಕ್ಷಸ ಪ್ರಾಣಿಗಳಿಂದ, ಅತಿಪ್ರಬಲವಾದ ಗುರುತ್ವಾಕರ್ಷಣ ಶಕ್ತಿಯಿಂದ ವಿಮಾನಗಳು ಸಾಗರ ತಳ ಸೇರಿರಬಹುದು, ಅಸಾಧಾರಣ ವಿದ್ಯುತ್ಕಾಂತೀಯ ವಲಯದಿಂದ ಎಲೆಕ್ಟ್ರಿಕ್ ಉಪಕರಣಗಳು ನಾಶವಾಗಿ ದುರಂತಗಳಾಗಿರಬಹುದು, ಆಕಾಶದಿಂದ ಅಥವಾ ಸಮುದ್ರ ಲೋಕದಿಂದ ಏಲಿಯನ್‌ಗಳು ಭೂಲೋಕದ ಜನರನ್ನು ತಮ್ಮ ಸಂಶೋಧನೆಗಳಿಗೆ ಪ್ರಯೋಗಪಶುಗಳಾಗಿ ಒಯ್ಯುತ್ತಿದ್ದಾರೆಂದು ಹೀಗೆ ನಾನಾ ರೀತಿಯ ವಿವರಣೆಗಳು ಬರ್ಮುಡಾ ಟ್ರ್ಯಾಂಗಲ್‌ನ ರಹಸ್ಯವನ್ನು ಬಗೆಹರಿಸದೇ ಇನ್ನೂ ನಿಗೂಢತೆ ಭಯ ಹೆಚ್ಚಿಸಿದವು..

ಬರ್ಮುಡಾ ಟ್ರ್ಯಾಂಗಲ್‌ನ ವಿಷಯ ಮುನ್ನಲೆಗೆ ಬರಲು ಕಾರಣ ಅಮೇರಿಕಾ ಪ್ಲೈಟ್-19 ವಿಮಾನ ನಾಪತ್ತೆಯಾದ ಪ್ರಕರಣ.. ಅಟ್ಲಾಂಟಿಕ್ ಸಾಗರದಲ್ಲಿ ಹೊಗುತ್ತಿದ್ದ ವಿಮಾನ ಆಕಸ್ಮಿಕವಾಗಿ ಸಂಪರ್ಕ ಕಡಿತಗೊಳ್ಳುತ್ತದೆ. ಈ ವಿಮಾನದ ಅವಷೇಶ ಹುಡುಕಲು ಹೋದ ಇನ್ನೈದು ವಿಮಾನಗಳು ಸಹ ಅದೃಶ್ಯವಾಗುತ್ತವೆ‌‌. ಈ ಘಟನೆಯ ನಂತರ ಇಂತಹ ಹಲವು ಪ್ರಕರಣಗಳು ದಾಖಲಾದವು..

ಈ ಪ್ರದೇಶದ ಬಗ್ಗೆ ಸಾಹಸಿಗಳು ಹಲವು ಸಂಶೋಧನೆಗಳನ್ನು ಕೈಗೊಂಡರೂ ನಿಖರವಾದ ವಿವರಣೆ ಸಿಗುತ್ತಿರಲಿಲ್ಲ, ಹಡಗುಗಳ ಮುಳುಗಡೆಕ್ಕೆ ಕಾರಣ ನೀಡಿದರೆ ಅದು ವಿಮಾನಗಳ ಪ್ರಕರಣಕ್ಕೆ ತಾಳೆ ಹೊಂದುತ್ತಿರಲ್ಲಿ‌.. ಎರಡನೇ ಮಹಾಯುದ್ಧದ ಸ್ಪೋಟಗಳಾದ ಬಾ‌ಂಬ್‌ಗಳು ಇನ್ನು ಸಾಗರ ತಾಳದಲ್ಲಿ ಇರಬಹುದು ಅವುಗಳ ಸ್ಪೋಟದಿಂದ ಸುನಾಮಿ ರೀತಿಯ ಅಲೆಗಳು ಈ ಭಾಗದಲ್ಲಿ ಬಂದು ಹಡಗುಗಳ ಮುಳಗಿಸಿರಬಹುದು..

ಪ್ರಾಚೀನ ನಾಗರೀಕತೆಯ ಕಾಲದಲ್ಲಿ ಇಲ್ಲೊಂದು ನಾಗರೀಕತೆ ಇದ್ದಿರಬಹುದು ಅವರ ಶಕ್ತಿ ಸ್ಥಾವರಗಳು ( ಅಣು ಶಕ್ತಿ ಸ್ಥಾವರ) ಇನ್ನೂ ಸಾಗರ ತಾಳದಲ್ಲಿ ಕಾರ್ಯ ನಿರ್ವಹಿಸುತ್ತಿರಬಹುದು ಎಂಬುದೂ ಒಂದು ವಾದ..

ವಿಜ್ಞಾನಕ್ಕೆ ಸವಾಲೋಡುವ ಈ ರೀತಿಯ ಹಲವು ಪ್ರದೇಶಗಳಿವೆ. ಜಪಾನ್ ದೇಶ ಬಳಿ ಇದೇ ರೀತಿಯ ನಿಗೂಢವಾಗಿ ಕಣ್ಮರೆಯಾಗುವ ಪ್ರದೇಶಯೊಂದಿದೆ. ಅದರ ಹೆಸರು "ಡ್ರ್ಯಾಗನ್ ಟ್ರ್ಯಾಂಗಲ್", "ಡೇವಿಲ್ಸ್ ಸೀ" ಎಂದು.. ಕಾಕತಾಳೀಯವೆಂಬತೆ ಇದು ಇರುವ ಪ್ರದೇಶ ಮತ್ತು ಬರ್ಮುಡಾ ಟ್ರ್ಯಾಂಗಲ್ ಇರುವ ಒಂದೇ ರೇಖಾಂಶದಲ್ಲಿ ಬರುತ್ತದೆ..

ಬರ್ಮುಡಾ ಟ್ರ್ಯಾಂಗಲ್ 35° ಪೂರ್ವ ರೇಖಾಂಶದಲ್ಲಿದೆ.

ಡ್ರ್ಯಾಗನ್ ಟ್ರ್ಯಾಂಗಲ್ 35° ಪಶ್ಚಿಮ ರೇಖಾಂಶದಲ್ಲಿದೆ.

ಭಾರತದಲ್ಲೂ ಸಹ ಇಂತಹ ಟ್ರ್ಯಾಂಗಲ್ ಇದೆ..‌ ಓಡಿಶಾ ರಾಜ್ಯದಲ್ಲಿ ಅಮಾರ್ಡಾ ಏರ್‌‌ಸ್ಟ್ರಿಪ್ ಎಂಬ ಸ್ಥಳ.. ಇದು ಬ್ರಿಟಿಷ್‌ರಿಂದ ರಚನೆಯಾಗಿದ್ದ ವಿಮಾನದ ರನ್ ವೇ ಆಗಿತ್ತು.. ಇಲ್ಲಿಯೂ ಸಹ ಹಲವು ವಿಮಾನಗಳ ದುರಂತ ಪ್ರಕರಣಗಳಾಗಿವೆ..  ಈ ಎಲ್ಲಾ ಟ್ರ್ಯಾಂಗಲ್‌ಗಳು ಸಹ ಸಮಭಾಜಕ ವೃತ್ತದ ಸಮೀಪದಲ್ಲಿವೆ..

ಈಗ ಈ ಟ್ರ್ಯಾಂಗಲ್‌ನ ಅದೃಶ್ಯ ಶಕ್ತಿಯ ರಹಸ್ಯ ಬಯಲಾಗಿದೆ. ಇಲ್ಲಿ ಯಾವುದೇ ಭೂತ ಪ್ರೇತಗಳ, ದೈವಿಕ ಅತಿಮಾನುಷ ಶಕ್ತಿಗಳಿಲ್ಲ ಎಂಬುದು ಜಗಜಾಹೀರವಾಗಿದೆ..

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಖರವಾದ ಕಾರಣ ಏನಿರಬಹುದು ಎಂದು ತಿಳಿಯಲು ಪ್ರದೀಪ್ ಕೆಂಜಿಗೆಯವರ ಈ ಪುಸ್ತಕ ಓದಿ…





Sunday, May 7, 2023

ಮರೆತುಹೋದ ಸಾಮ್ರಾಜ್ಯ-ವಿಜಯನಗರ

 ಪುಸ್ತಕ :- ಮರೆತುಹೋದ ಸಾಮ್ರಾಜ್ಯ-ವಿಜಯನಗರ ( Forgotten Empire-Vijayanagara )

ಮೂಲ ಲೇಖಕರು :- ರಾಬರ್ಟ್ ಸೆವೆಲ್

ಅನುವಾದ :- ಪ್ರೊ. ವೆಂಕಟಾಚಲ ಶಾಸ್ತ್ರಿ

ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂಬಂತೆ ನಮ್ಮ ಮೂಲ ಅಸ್ಥಿತ್ವದ, ನಮ್ಮ ನೆಲದ ಜ್ಞಾನವಿಲ್ಲದವರ ಸಂಖ್ಯೆ ಹಿಂದೆ ಎಷ್ಟಿತೋ ಇವತ್ತಿಗೂ ಅಷ್ಟೇ ಇದೆ ಎನ್ನಲು ಈ ಪುಸ್ತಕವೇ ಸಾಕ್ಷಿ.. ಕಲೆ,ಸಾಹಿತ್ಯ, ವಾಸ್ತುಶಿಲ್ಪ, ವೈದ್ಯಕೀಯ, ವೈಜ್ಞಾನಿಕ ಎಲ್ಲಾ ಕ್ಷೇತ್ರಗಳಲ್ಲಿ ಪಾಶ್ಚಾತ್ಯರಿಗೂ ಮೀರಿಸುವ ಜ್ಞಾನ ಭಂಡಾರ ನಮ್ಮಲ್ಲಿದ್ದರೂ ಅದನ್ನು ದಾಖಲಿಸುವ ಪ್ರಯತ್ನ ಭಾರತೀಯರಿಂದ ಆಗಿದ್ದು ತೀರ ವಿರಳ. ಭಾರತದ ಇತಿಹಾಸವನ್ನು ವಿದೇಶಿ ಬರವಣಿಗೆಯಲ್ಲಿ ಹುಡುಕಿ ತಿಳಿಯುವ ಪರಿಸ್ಥಿತಿ ನಮ್ಮದಾಗಿದೆ. ನಮ್ಮದೇ ಇತಿಹಾಸವನ್ನು ಓದಿ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಿದೆ ಎಂದು ಪುರಸ್ಕಾರ ಪಡೆದ ಹಲವು ವಿದೇಶಿಗರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.. ನಮ್ಮವರಿಂದ ಮರೆತು ಮರೆಯಾಗಿದ್ದ ಇತಿಹಾಸದ ಸುವರ್ಣಯುಗವನ್ನು ನೆನಪಿಸಿ ಕಣ್ ತೆರೆಸಿದ ಸೆವೆಲ್‌ ಅವರಿಗೆ ಧನ್ಯವಾದ..

 ಭಾರತದ ಇತಿಹಾಸದಲ್ಲಿ ಕ್ರಿ.ಶ 1336 ಕಾಲಘಟ್ಟದಲ್ಲಿ ಒಂದು ರೋಚಕ ಘಟನೆ ಜರುಗಿತು. ಇಡೀ ದಕ್ಷಿಣ ಭಾರತದ ರಾಜಕೀಯ ಸ್ಥಿತಿಯಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ ಕಾಲ.. ಅದ್ಭುತ ಇತಿಹಾಸ ಸೃಷ್ಟಿಸಿದ ಅಮೋಘ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಅನುಪಮ ವರ್ಷ.. 

ಭಾರತ ಮಧ್ಯಕಾಲೀನ ಇತಿಹಾಸದಲ್ಲಿ ಮುಸ್ಲಿಂ ಆಡಳಿತದ ಪ್ರಾಬಲ್ಯವಿದ್ದ ಸಂದರ್ಭದಲ್ಲಿ ಹಿಂದೂ ಧರ್ಮದ ಉಳಿವಿಗಾಗಿ ಆಖಂಡ ದಕ್ಷಿಣ ಭಾರತದ ಉದ್ದಗಲಕ್ಕೂ ಗಡಿಹೊಂದಿದ ವಿಜಯನಗರ ಸಾಮ್ರಾಜ್ಯ ಬೆಳಕಿಗೆ ಬರುತ್ತದೆ‌. ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಹಲವು ಐತಿಹ್ಯಗಳು ದಂತಕಥೆಗಳಿವೆ. ನಾವೆಲ್ಲ ಕೇಳಿರುವಂತೆ ಮೊಲ ಬೇಟೆನಾಯಿಯ ಅಟ್ಟಿಸಿಕೊಂಡು ಹೋದ ಕತೆ, ವಿದ್ಯಾರಣ್ಯರ ಮಾರ್ಗದರ್ಶನದಂತೆ ಸಾಮ್ರಾಜ್ಯ ಸ್ಥಾಪನೆ, ಮುಸ್ಲಿಂ ಸೇನೆಯಲ್ಲಿದ್ದ ಇಬ್ಬರು ಯುವಕರು ಆನೆಗುಂದಿಗೆ ಬಂದು ನೆಲೆಸಿ ಹೊಸ ಸಾಮ್ರಾಜ್ಯ ಕಟ್ಟಿದ ಕತೆ. ಗುರು ವಿದ್ಯಾರಣ್ಯರ ಸೇವೆ ಮಾಡುತ್ತಿದ್ದ ಕುರುಬರ ಹುಡುಗ ಈ ಸಾಮ್ರಾಜ್ಯ ಸ್ಥಾಪಿಸಿದ ಹೀಗೆ ಹಲವು ಸ್ವಾರಸ್ಯಕರ ಘಟನೆಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.. 

ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಹಲವು ಇತಿಹಾಸಕಾರರ ಹೇಳಿಕೆಗಳಲ್ಲಿ ಗೊಂದಲಗಳಿರುವುದರಿಂದ ಸ್ಥಾಪನೆಯ ಸ್ಪಷ್ಟವಾಗಿ ಮಾಹಿತಿ ಸಿಗುವುದಿಲ್ಲ.. ಆನೆಗುಂದಿಯಿಂದ ಈ ಸಾಮ್ರಾಜ್ಯ ಬುನಾದಿ ಪ್ರಾರಂಭವಾಗಿ ವಿದ್ಯಾರಣ್ಯರ ಆಶೀರ್ವಾದದಿಂದ ಬೆಳೆಯಿತು ಎಂಬುದು ನಿರ್ವಿವಾದವಾಗಿದೆ…

ವಿಜಯನಗರ ಸಾಮ್ರಾಜ್ಯ ಎಂದಾಕ್ಷಣ ಮುತ್ತು ರತ್ನಗಳನ್ನು ಸಂತೆಗಳಲ್ಲಿ ರಾಶಿ ಹಾಕಿ ಮಾರವಷ್ಟು ಶ್ರೀಮಂತ ಸಾಮ್ರಾಜ್ಯ ಎಂದು ನಾವೆಲ್ಲ ಓದಿದ್ದೇವೆ. ಆ ಸಂಪತ್ತಿನ ಮೂಲದ ಬಗ್ಗೆ ಹಲವು ರೋಚಕ ಘಟನೆಗಳು ಇಲ್ಲಿವೆ.. ಕೋರಮಂಡಲ ಸಮುದ್ರದಲ್ಲಿನ ದ್ವೀಪದಲ್ಲಿಯೊಂದರಲ್ಲಿ ವಜ್ರ ವೈಡೂರ್ಯ ದೊರೆಯಿತೆಂದು ಅಲ್ಲಿಗೆ ಹೋಗಲು ರಾಜ ಕಲ್ಲಿನ ಸೇತುವೆ ಕಟ್ಟಿಸಿದ್ದ ನಂತರ ಅದು ಸಮುದ್ರದಲ್ಲಿ ಮುಳುಗಿತೆಂದು ಹೀಗೆ ಹಲವು ರೋಚಕ ಮಾಹಿತಿಯನ್ನು ನೀಡಲಾಗಿದೆ. ನಮಗೆ ಜಗತ್ ಪ್ರಸಿದ್ಧ ಕೊಹಿನೂರ್ ವಜ್ರದ ಬಗ್ಗೆ ಗೊತ್ತು, ಇದು ವಿಜಯನಗರದ ನೆರೆಯ ರಾಜ್ಯವಾಗಿದ್ದ ಹೈದ್ರಾಬಾದ್ ಸಂಸ್ಥಾನಕ್ಕೆ ಸೇರಿದ್ದ ಗೋಲ್ಕೊಂಡ ಕೋಟೆಯಿಂದ ದೆಹಲಿ ಸುಲ್ತಾನರ ವಶಕ್ಕೆ ಹೋಗುತ್ತದೆ. ಗೋಲ್ಕೊಂಡದ ಸಮೀಪದಲ್ಲಿ ವಜ್ರದ ಬೃಹತ್ ಗಣಿ ಇದ್ದಿತು ಅಲ್ಲಿಂದ ವಿಜಯನಗರಕ್ಕೆ ಬೆಲೆಬಾಳುವ ವಜ್ರ ವೈಡೂರ್ಯಗಳು ಬರುತ್ತಿದ್ದವು, ಹೀಗೇ ಸಂಪತ್ತಿನ ಮೂಲದ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಪ್ರೌಢದೇವರಾಯ,ಕೃಷ್ಣದೇವರಾಯನ ಕಾಲದಲ್ಲಿನ ಸುವರ್ಣಯುಗ ಧಾರ್ಮಿಕ ಸೌಹಾರ್ದತೆ, ಆರ್ಥಿಕ ಪ್ರಗತಿ, ಸಾಮ್ರಾಜ್ಯದ ವಿಸ್ತರಣೆ, ಪೋರ್ಚುಗೀಸ್‌ರ ನಡುವಿನ ಬಾಂದವ್ಯ,ಗೋವ ಹಾಗೂ ಅನ್ಯ ದೇಶಗಳೊಂದಿಗೆ ವಿಜಯನಗರದ ಸಹಸಂಬಂಧ ಹೀಗೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ವಿಜಯನಗರ ಸಾಮ್ರಾಜ್ಯದ ಅವನತಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಘಟನೆಗಳು, ಕೃಷ್ಣ ನದಿಯ ಉತ್ತರಕ್ಕಿದ್ದ ಮುಸ್ಲಿಂ ಸಾಮ್ರಾಜ್ಯದೊಂದಿಗಿನ ವೈರತ್ವ, ಗೋವಾದ ವ್ಯಾಪಾರ ಸಂಪರ್ಕ ಕಡಿತದಿಂದ ಆರ್ಥಿಕ ಹಿನ್ನಡೆ ಹಾಗೂ ಸಾಮ್ರಾಜ್ಯ ಅವನತಿಗೆ ಕಾರಣವಾದ ರಕ್ಕಸತಂಗಡಗಿ ( ತಾಳಿಕೋಟೆ ) ಕದನದಲ್ಲಿ ಭಾಗವಹಿಸಿ ಹೋರಾಡಿದ ರೀತಿ ಹಾಗೂ ವಿಜಯನಗರದ ದೇವಾಲಯಗಳ ನಾಶ, ಸಂಪತ್ತಿನ ಲೂಟಿ ಹೀಗೆ ಹಲವು ಘಟನೆಗಳನ್ನು ಇಲ್ಲಿಗೆ ಭೇಟಿ ನೀಡಿದ ವಿದೇಶಿ ಬರಹಗಾರ ಉಲ್ಲೇಖಗಳಿಂದ ಹಾಗೂ ತಾನು ಕಂಡ ಸಾಮ್ರಾಜ್ಯದ ಅವಷೇಶಗಳಿಂದ ವಿಜಯನಗರ ಇತಿಹಾಸವನ್ನು ನಮಗೆ ಪರಿಚಯಿಸುವ ಕಾರ್ಯ ಮಾಡಲಾಗಿದೆ‌‌.. ಇತಿಹಾಸದಲ್ಲಿ ಆಸಕ್ತಿ ಇರುವವರು ಹಾಗೂ ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಯ ಬಯಸುವವರು ಈ ಪುಸ್ತಕ ಓದಲೇ ಬೇಕು. ಇದು ಸಂಕ್ಷಿಪ್ತ ಆವೃತ್ತಿಯಾಗಿದ್ದು, ಇದೇ ಹೆಸರಿಂದ ಸಂಪೂರ್ಣ ಪುಸ್ತಕ ಸಹ ದೊರೆಯುತ್ತದೆ.