ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, March 20, 2020

ಜೇನುಕಲ್ಲಿನ ರಹಸ್ಯ ಕಣಿವೆ

ಪುಸ್ತಕ:- ಜೇನುಕಲ್ಲಿನ ರಹಸ್ಯ ಕಣಿವೆ
ಲೇಖಕರು:- ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ಅವರ ಪಶ್ಚಿಮಘಟ್ಟಗಳ ರಮಣೀಯ ಸೌಂದರ್ಯದ ಜೊತೆ ಅಲ್ಲಿನ ಕರಾಳ ಮುಖ ಪರಿಚಯಿಸುವ ಸರಣಿ ಕಾದಂಬರಿಗಳಾದ "ಮಲೆನಾಡಿನ ರೋಚಕ ಕತೆಗಳು" ಇದರ ಭಾಗ-4ನೇ ಪುಸ್ತಕವೇ ಜೇನುಕಲ್ಲಿನ ರಹಸ್ಯ ಕಣಿವೆ..

ಕಥಾವಸ್ತು:- ಪಶ್ಚಿಮಘಟ್ಟಗಳಲ್ಲಿ ಜೇನುಹುಳಗಳ ಬಗ್ಗೆ ರಿಸರ್ಚ್ ಮಾಡಲು ಹೋಗುವ ಸೈಂಟಿಸ್ಟ್;ಅಲ್ಲಿ ಗಾಂಜಾ ಬೆಳೆಯುವ ಮಾಫಿಯಾದಿಂದ ಜೇನುಕಣಿವೆಯಲ್ಲಿ ಹತನಾಗುವುದು.ಗಾಂಜಾ ಬೆಳೆಯಲು ನೆರವು ನೀಡಿದ್ದ ಅರಣ್ಯಾಧಿಕಾರಿಯ ಮಕ್ಕಳು ಅದೇ ಗಾಂಜಾದ ದಾಸರಾಗುವ ಕಥಾ ಹಂದರವಿದೆ..

ಪಾತ್ರಗಳು:- ಡಾ.ಮುಖರ್ಜಿ(ಸೈಂಟಿಸ್ಟ್),
                     ಚಂದ್ರಪಾಲ್(ಅರಣ್ಯಾಧಿಕಾರಿ)
                     ಕಿಷನ್ ಮಲ್ಲಿಕ್(ಡ್ರಗ್ಸ್ ಮಾಫಿಯಾ ಡಾನ್),
                     ಮಧುಮಿತ, ಮನೋಹರ,ಸುಲೇಖ,ಸಿಂಧೂ etc..


ಸುತ್ತಲೂ ಎತ್ತರದ ಪಶ್ಚಿಮ ಘಟ್ಟ ಸಾಲಿನ ಬೆಟ್ಟಗಳ ನಡುವಿರುವ ಸುಂದರ ಸ್ಥಳ ಸಕಲೇಶಪುರ.. ಇಲ್ಲಿನ ಅರಣ್ಯಾಧಿಕಾರಿಯಾಗಿದ್ದ ಚಂದ್ರಪಾಲ ಹಣದಾಸೆಯಿಂದ ತನ್ನ ವ್ಯಾಪ್ತಿಯ ಕಾಡಿನಲ್ಲಿ ಗಾಂಜಾ ಬೆಳೆಯಲು ನೆರವು ನೀಡಿ ಲಕ್ಷ ಲಕ್ಷ ಗಳಿಸುತ್ತ ನೆಮ್ಮದಿಯಾಗಿದ್ದನು..
ಜೇನುಹುಳು ಬಗ್ಗೆ ಸಂಶೋಧನೆ ಮಾಡಲು ಸುಪ್ರಸಿದ್ಧ ವಿಜ್ಞಾನಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಈ ಅರಣ್ಯಾಧಿಕಾರಿಯ ವ್ಯಾಪ್ತಿಯಲ್ಲಿಯೇ ಬರುವ ಜೇನಿಗೆ ಪ್ರಸಿದ್ಧವಾದ ಜೇನುಕಲ್ಲಿನ ಬೆಟ್ಟದಲ್ಲಿ ಸಂಶೋಧನೆ ನಡೆಸಿಲು ನಿರ್ಧರಿಸುತ್ತಾರೆ..
ತನ್ನ ಜೊತೆ ಇಬ್ಬರು ಸಹಾಯಕರು(ಮನೋಹರ ,ಮಧುಮಿತ) ಹಾಗೂ ಇಬ್ಬರು ಫಾರೆಸ್ಟ್ ಗಾರ್ಡ್ಗಳು(ಮೇದಪ್ಪ,ಜವರೇಗೌಡ) ಹಾಗೂ ಒಬ್ಬ ಸ್ಥಳೀಯನೊಂದಿಗೆ(ಸಿದ್ಧ) ಮುಖರ್ಜಿಯವರು ಜೇನು ಕಲ್ಲಿನ ಬೆಟ್ಟಕ್ಕೆ ಬಂದು ಡೇರೆಯನ್ನು ಹಾಕಿ ಸಂಶೋಧನೆಯನ್ನು ಪ್ರಾರಂಭಿಸಿದರು.. ಪ್ರತಿದಿನ ಪ್ರಕೃತಿಯ ಬಗೆಬಗೆಯ ಸೌಂದರ್ಯವನ್ನು ಸವಿಯುತ್ತ  ಜೇನುಹುಳುಗಳ ವಿನಾಶಕ್ಕೆ  ಕಾರಣವನ್ನು  ಪತ್ತೆಹಚ್ಚುವ ಸಂಶೋಧನೆಯು ಸಾಗಿತ್ತು. ಹೀಗಿರುವಾಗ ಒಮ್ಮೆ ರಾತ್ರಿ ಇವರ ಡೇರೆಗೆ ಟೈಗಾನ್(ಹುಲಿ ಸಿಂಹ ಮಿಶ್ರತಳಿ) ದಾಳಿ ಮಾಡುತ್ತದೆ. ಈ ಪ್ರಾಣಿಯನ್ನು ಕಂಡು ಆಶ್ಚರ್ಯಚಕಿತರಾದ ಮುಖರ್ಜಿಯವರು ಇದರ ಬಗ್ಗೆ ಹೆಚ್ಚು ತಿಳಿಯಲು ಜೇನುಕಲ್ಲಿನ ಬೆಟ್ಟದಿಂದ ಆಚೆ ಇರುವ ಬೆಟ್ಟಗಳಿಗೆ ಹೋದಾಗ ಅಲ್ಲಿ ಎಕರೆಗಟ್ಟಲೆ ಬೆಳೆದ ಗಾಂಜಾ ಬೆಳೆಯನ್ನು ಕಾಣುತ್ತಾರೆ.. ಮಾಫಿಯಾ ಗ್ಯಾಂಗ್‌ನ ದುಷ್ಟರು ಇವರು ಯಾರೆಂದು ತಿಳಿಯದೆ ವಿಜ್ಞಾನಿ ಮತ್ತು ಫಾರೆಸ್ಟ್ ಗಾರ್ಡ್ ಮೇದಪ್ಪನನ್ನು ಜೇನುಕಲ್ಲು ಕಣಿವೆಯ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡುತ್ತಾರೆ. ಮಾಫಿಯದವರು ಮುಖರ್ಜಿಯವರ ಕೊಲೆ ಮಾಡುವುದನ್ನು ಮಧುಮಿತ ನೋಡಿದ್ದಳು. ಆದರೆ ಮಾಫಿಯದವರು ಮಧುಮಿತಳೇ ಕೊಲೆ ಮಾಡಿದಳೆಂದು ಸಾಬೀತು ಮಾಡಲು ಪ್ರಯತ್ನಿಸುತ್ತಾರೆ, ಈ ಪ್ರಯತ್ನದಲ್ಲಿ ಭ್ರಷ್ಟನಾದ ಚಂದ್ರಪಾಲನು ಸೇರಿರುತ್ತಾನೆ..

ಮತ್ತೊಂದೆಡೆ ಭ್ರಷ್ಟ,ಧನದಾಹಿ ಚಂದ್ರಪಾಲ್‌ನ ಸಂಸಾರದ ವ್ಯಥೆಯ ಕಥೆಯನ್ನು ಕಾಣುತ್ತೇವೆ. ಇವನ ಪತ್ನಿ(ಸುಲೇಖ)80 ಸಾವಿರ ಸಂಬಳ ಬರುವ ನೌಕರಿ ಮಾಡುತ್ತಿರುತ್ತಾಳೆ.ಹೀಗೆ ಪತಿ-ಪತ್ನಿ ಹಣದ ಹಿಂದೆ ಓಡುತ್ತಾ ತಮ್ಮ ಮಕ್ಕಳಿಗೆ(ಮಗಳು-ಸಿಂಧೂ, ಮಗ-ಸುಮಿತ್) ಕೊಡಬೇಕಾದ ಅಕ್ಕರೆ ಪ್ರೀತಿಯನ್ನು ದೂರ ಮಾಡುತ್ತಾರೆ.. ತಂದೆ-ತಾಯಿಯರ ಪ್ರೀತಿಯನ್ನು ಕಾಣದ ಮಕ್ಕಳು ಡ್ರಗ್ಸ್ ಚಟಕ್ಕೆ ಬಲಿಯಾಗಿ ಅದರ ದಾಸರಾಗುತ್ತಾರೆ. ಇದನ್ನು ತಿಳಿದ ದಂಪತಿಗಳು ಮಕ್ಕಳನ್ನು ಚಟದಿಂದ ಮುಕ್ತರನ್ನಾಗಿ ಮಾಡಲು ನಡೆಸುವ ಪ್ರಯತ್ನಗಳು ಕಾಣಬಹುದು.. ಗಾಂಜಾ ಬೆಳೆಯಲು ನೆರವು ನೀಡಿ ತನ್ನ ಮಕ್ಕಳ ಜಾಲದಲ್ಲಿ ಸಿಕ್ಕಿಕೊಂಡಾಗ ವ್ಯಥೆಪಡುವ ಚಂದ್ರಪಾಲನ್ನು ತನ್ನ ತಪ್ಪಿನ ಅರಿವಾಗಿ ಮಧುಮಿತಳನ್ನು ಜೈಲು ಶಿಕ್ಷೆಯಿಂದ ಪಾರು ಮಾಡುವುದು ಮುಂತಾದ ರೋಚಕ ವಿಚಾರಗಳನ್ನು ನಾವು ಈ ಪುಸ್ತಕದಲ್ಲಿ ಕಾಣುತ್ತೇವೆ..
ಮಾಡಿದ ಕರ್ಮಗಳಿಗೆ ತಕ್ಕ ಫಲ ಪಡೆದೇ ಪಡೆಯುತ್ತೇವೆ ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ ಚಂದ್ರಪಾಲನ ಸಂಸಾರ.. "ಮಾಡಿದ್ದನ್ನು ಅನುಭವಿಸಲೇಬೇಕು" ಎನ್ನುವ ಸಾರ ಕಾದಂಬರಿಯಲ್ಲಿದೆ..

ಲೇಖಕರು ಡಾ.ಮುಖರ್ಜಿ ಅವರ ಸಂಶೋಧನೆಯ ಕತೆ ಹಾಗೂ ಚಂದ್ರಪಾಲನ ಸಂಸಾರದ ವ್ಯಥೆ ಎರಡನ್ನು ಜೊತೆಯಾಗಿ ಹೇಳುತ್ತಾ ಓದುಗರಿಗೆ ಕುತೂಹಲವನ್ನು ಕೆರಳಿಸುತ್ತಾ, ಎಲ್ಲೂ ಬೇಸರವಾಗದಂತೆ ಅತ್ಯುತ್ತಮವಾಗಿ ಕಥೆಯನ್ನು ಹೆಣೆದಿದ್ದಾರೆ..

Monday, March 16, 2020

ಹಿಮಾಲಯನ್ ಬ್ಲಂಡರ್

ಪುಸ್ತಕ:- ಹಿಮಾಲಯನ್ ಬ್ಲಂಡರ್
ಲೇಖಕರು:- ರವಿ ಬೆಳಗೆರೆ
ಮೂಲ ಬರವಣಿಗೆ:- ಬ್ರಿಗೇಡಿಯರ್ ಜಾನ್.ಪಿ.ದಳವಿ

ಹಿಮಾಲಯನ್ ಬ್ಲಂಡರ್ ಇದು ಕಥೆ-ಕಾದಂಬರಿಯಲ್ಲ, ಪ್ರಬಂಧವಲ್ಲ, ಇತಿಹಾಸವೂ ಅಲ್ಲ, ಇದು ಒಬ್ಬ ಮಹಾ ಯೋಧನ ಕಣ್ಣೀರು..
ಭಾರತ ಕಂಡ ಮಹಾಯೋಧ ಬ್ರಿಗೇಡಿಯರ್ ಜಾನ್ ಪರಶುರಾಮ ದಳವಿ ಅವರು 1962ರ ಭಾರತ ಚೀನಾ ನಡುವಿನ ಯುದ್ಧದ ಸ್ಥಿತಿಗತಿಯನ್ನು ಕುರಿತು ಬರೆದ ವರದಿಯೇ ಹಿಮಾಲಯನ್ ಬ್ಲಂಡರ್..
ಇಂತಹ ಅದ್ಭುತ ವಿಚಾರವನ್ನು ಕನ್ನಡಿಸಿ ಎಲ್ಲ ಕನ್ನಡಾಭಿಮಾನಿಗಳಿಗೆ ಓದಲು ಅನುವು ಮಾಡಿಕೊಟ್ಟ ರವಿ ಬೆಳಗೆರೆಯವರಿಗೆ ತುಂಬು ಹೃದಯದ ಧನ್ಯವಾದಗಳು..

ಭಾರತ ಕಂಡ ಮಹಾಯುದ್ಧಗಳಲ್ಲಿ ಭಾರತ-ಚೀನಾ ನಡುವಿನ 1962ರ ಥಗ್ಲ ಯುದ್ಧವು ಸಹ ಪ್ರಮುಖವಾದದ್ದು; ಯುದ್ಧದಲ್ಲಿ ಭಾರತದ ಸೈನ್ಯಕ್ಕೆ ಸೋಲುಂಟಾಯಿತು ಎಂಬುದು ನಾವು ನೀವು ತಿಳಿದ ಇತಿಹಾಸ.
ಈ ಯುದ್ಧದಲ್ಲಿ ಭಾರತ ಸೋತಿದ್ದೇಕೆ ಎಂಬ ಪ್ರಶ್ನೆಗೆ ಪುಸ್ತಕದಲ್ಲಿ ಉತ್ತರ ಸಿಗುತ್ತದೆ..

"1962ರ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ಈ ಪುಸ್ತಕವೊಂದು ಮುದ್ರಿತ ವೀರಗಲ್ಲು"

1962 ಜನವರಿಯಲ್ಲಿ ದಳವಿ ತವಾಂಗ್ ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೆವೆನ್ ಇನ್‌ಫೆಂಟ್ರಿ ಬ್ರಿಗೇಡ್‌ನ ಬ್ರಿಗೇಡಿಯರ್ ಆಗಿ ಕಾರ್ಯನಿರ್ವಹಿಸಿದರು. ಒಂದು ಬ್ರಿಗೇಡ್‌ನಲ್ಲಿ 3500 ಸೈನಿಕರು ಇರುತ್ತಾರೆ,ಅದರ ಮುಖ್ಯಸ್ಥರು ಈ ದಳವಿ..
ತವಾಂಗ್ ಎಂಬುದು ಅರುಣಾಚಲ ಪ್ರದೇಶ ಭೂತಾನ್ ಚೀನಾ ಗಡಿಯಲ್ಲಿರುವ ಪ್ರದೇಶ. ಇದು ಹಿಮಾಲಯದ ಸಾವಿರಾರು ಅಡಿ ಎತ್ತರದಲ್ಲಿರುವ ಪರ್ವತ ಸರಣಿಗಳಲ್ಲಿರುವ ಭಾಗ. ಇಲ್ಲಿಯ ಒಂದು ಪ್ರದೇಶ ಧೋಲಾ ಪೋಸ್ಟ್..
ನಮ್ಕಾ ಚು ಎಂಬ ನದಿಯ ದಂಡೆಯಲ್ಲಿ ಈ ದುರ್ಗಮ ದೋಲಾ ಪೋಸ್ಟ್ ಇದೆ.(ನೀವು ಗೂಗಲ್ ಮ್ಯಾಪ್ ನಲ್ಲಿ ಸ್ಥಳವನ್ನು ನೋಡಬಹುದು) ಇದರ ರಕ್ಷಣೆಯ ಜವಾಬ್ದಾರಿಯನ್ನು ಬ್ರಿಗೇಡಿಯರ್ ದಳವಿಯವರಿಗೆ ನೀಡಲಾಗಿತ್ತು.ಇದರ ರಕ್ಷಣೆಗಾಗಿ  ನಡೆದ ಯುದ್ಧವೇ ಥಗ್ಲ ಯುದ್ಧ..
ಯುದ್ಧದಲ್ಲಿ ಭಾರತೀಯರಿಗೆ ಸೋಲಾಯಿತು.. ಸೋಲಾಗಲು ಮುಖ್ಯ ಕಾರಣ ಸೈನಿಕರಲ್ಲ; ದಿಲ್ಲಿಯಲ್ಲಿ ಕೂತು ಆಡಳಿತ ನಡೆಸುತ್ತಿದ್ದ ಪಟ್ಟಬದ್ದ ಹಿತಾಸಕ್ತಿಗಳು, ರಾಜಕೀಯ ಮುಖಂಡರು ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಸೈನ್ಯದ ಹಿರಿಯ ಅಧಿಕಾರಿಗಳು ಇವರು ನಿಜವಾದ ಕಾರಣೀಭೂತರು.
ಯುದ್ಧದ ಸಮಯದಲ್ಲಿ ಸೈನಿಕರ ಸ್ಥಿತಿ ಹೇಗಿತ್ತೆಂದರೆ ಕೊರೆಯುವ ಚಳಿಯಲ್ಲಿ ಧರಿಸಲು ಸರಿಯಾದ ಬೂಟುಗಳಿಲ್ಲ, ತಲೆಮರೆಸಿಕೊಳ್ಳಲು ಚಿಕ್ಕ ಬಂಕರುಗಳು ಸಹ ಇಲ್ಲ, ಹೊಟ್ಟೆ ತುಂಬಾ ತಿನ್ನಲು ಆಹಾರವಿಲ್ಲ, ಯುದ್ಧದಲ್ಲಿ ವೈರಿಗಳೊಂದಿಗೆ ಹೋರಾಡಲು ಸಾಕಾಗುವಷ್ಟು ಮದ್ದುಗುಂಡುಗಳ ಕೊರತೆಯು ಸೈನಿಕರಲ್ಲಿತ್ತು.. ಆದರೂ ನಮ್ಮ ಹೆಮ್ಮೆಯ ಯೋಧರು ಬಂದೂಕಿನಲ್ಲಿ ಕೊನೆಯ ಗುಂಡು ಇರುವವರೆಗೂ ಚೀನಾ ಸೈನಿಕರೊಂದಿಗೆ ವೀರಾವೇಶದಿಂದ ಹೋರಾಟವನ್ನು ನಡೆಸುತ್ತಾರೆ. ಹೋರಾಡಲು ಶಸ್ತ್ರಾಸ್ತ್ರಗಳ ಇಲ್ಲದಾಗ ಸೈನಿಕರು ಹುತಾತ್ಮರಾಗುತ್ತಾರೆ..
ಚೀನಿ ಸೈನಿಕರು ಭಾರತದ 3500ಕ್ಕೂ ಹೆಚ್ಚು ಸೈನಿಕರನ್ನು ನರಮೇಧ ಮಾಡಿದರು. ಇದಕ್ಕೆ ಕಾರಣರಾದ ಅಂದಿನ ಸರ್ಕಾರ ಮತ್ತು ಸೈನ್ಯದ ಭ್ರಷ್ಟ ಅಧಿಕಾರಿಗಳು; ಇಂತಹ ವ್ಯವಸ್ಥೆಗೆ ನನ್ನದೊಂದು ಧಿಕ್ಕಾರ..

ಮನುಷ್ಯ ನೆಮ್ಮದಿಯ ಕಾಲದಲ್ಲಿ ಮೂವರನ್ನು ಮರೆತು ಬಿಡುತ್ತಾನೆ ದೇವರನ್ನು ವೈದ್ಯರನ್ನು ಹಾಗೂ ಸೈನಿಕರನ್ನು. ಅಂದಿನ ಸರ್ಕಾರ ಸೈನಿಕರನ್ನು ಮರೆಯಿತು ಭಾರತಕ್ಕೆ ಹೀನಾಯ ಸೋಲುಂಟಾಯಿತು..
ಯುದ್ಧದಲ್ಲಿ ದಳವಿಯವರು ಚೀನಾದ ಶತ್ರು ಶಿಬಿರದಲ್ಲಿ ಯುದ್ಧ ಬಂಧಿಯಾಗಿ ತಿಂಗಳುಗಟ್ಟಲೆ ಇದ್ದು ಹೊರಬಂದ ಮೇಲೆ ದೇಶವನ್ನಾಳುವವರ ಕೈಗೆ ಬರೆದುಕೊಟ್ಟ ವಾರ್ ರಿಪೋರ್ಟ್ ಈ ಹಿಮಾಲಯನ್ ಬ್ಲಂಡರ್..
ಯುದ್ಧದ ಸ್ಥಿತಿ ಯಾವ ರೀತಿಯದಾಗಿತ್ತು ಹಾಗೂ ನಮ್ಮ ಸೈನಿಕರ ಸ್ಥಿತಿ ಈ ವ್ಯವಸ್ಥೆಯಲ್ಲಿ ಸಿಲುಕಿ ಯಾವ ಮಟ್ಟಕ್ಕೆ ಹಾಳಾಗಿತ್ತು ಎಂಬುದು ನಮಗೆ ತಿಳಿಯುತ್ತದೆ.
ಸೈನಿಕರೇನು ಯಂತ್ರಗಳಲ್ಲ, ಅವರು ಸಹ ನಮ್ಮಂತೆಯೇ ಮನುಷ್ಯರು. "ಯುದ್ಧಭೂಮಿಯಲ್ಲಿ ಸಿಂಹದಂತೆ ಹೋರಾಡಬೇಕು ಅಧಿಕಾರಿಗಳ ಆಜ್ಞೆಯನ್ನು ನಾಯಿಯಂತೆ ಪಾಲಿಸಬೇಕು" ಎಂದರೆ ಯಾವ ಸೈನ್ಯ ತಾನೇ  ಯುದ್ಧವನ್ನು ಗೆಲ್ಲಲು ಸಾಧ್ಯ...
ದಿಲ್ಲಿಯಲ್ಲಿ ಕೂತು ಆಜ್ಞೆ ಮಾಡುವ ಅಧಿಕಾರಿಗೆ ಯುದ್ಧಭೂಮಿಯ ವಾಸ್ತವ ಸ್ಥಿತಿಯ ಅರಿವಿರುವುದಿಲ್ಲ. ಸೈನಿಕರಿಗೆ ಯುದ್ಧಭೂಮಿಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರಬೇಕು ಹಾಗೂ ಸಾಕಾಗುವಷ್ಟು ಶಸ್ತ್ರಾಸ್ತ್ರಗಳ ಪೂರೈಕೆಯಾಗಬೇಕು ಆಗತಾನೇ ಸೈನಿಕ ಜಯಮಾಲೆ ಧರಿಸಲು ಸಾಧ್ಯ..

Tuesday, March 10, 2020

ದಾಸಕೂಟ

ಪುಸ್ತಕ:-ದಾಸಕೂಟ
ಲೇಖಕರು:-ಬೀChi


ಕನ್ನಡ ವಾಙ್ಮಯ ಪ್ರಪಂಚದಲ್ಲಿ ಸಂಪ್ರದಾಯ ಶರಣತೆಗೆ ಸೆಡ್ಡು ಹೊಡೆದು,ವೈಚಾರಿಕತೆಗೆ ಪ್ರಾಶಸ್ತ್ಯ ನೀಡಿ, ತಮ್ಮದೇ ಆದ ಅಪರೂಪದ, ಮೊನಚಾದ ವ್ಯಂಗ್ಯ ಶೈಲಿಯನ್ನು ಸಾಧಿಸಿಕೊಂಡು,ದಿಟ್ಟ ಬರವಣಿಗೆಗೆ ಹೆಸರಾದ ಬೀchiಯವರ ಮೊದಲ ಕಾದಂಬರಿ ದಾಸಕೂಟ..

ಕಥಾನಾಯಕ:-ಉಮೇಶ
ಪಾತ್ರಗಳು:-ಉಮೇಶ,ನಾಗಮ್ಮ,ಕಾವೇರಿ,ಸುಬ್ಬಕ್ಕ,ರಾಮಮೂರ್ತಚಾರ್ಯರು, ....
ಕಥಾವಸ್ತು:-ಉಮೇಶನ ಜೀವನಕ್ಕೆ ಹೊಂದಿಕೊಂಡಂತೆ ಸಮಾಜದಲ್ಲಿನ ಅನಿಷ್ಟಗಳು,ಭ್ರಷ್ಟವ್ಯವಸ್ಥೆ,ಜಾತೀಯತೆ,ಸ್ತ್ರೀ ಸ್ವಾತಂತ್ರ್ಯ ಹೀಗೆ ಹಲವು ವಿಚಾರಗಳ ಸುತ್ತ ಸುತ್ತುವ ಕಥೆ..

ದಾಸಕೂಟವೆಂದರೆ ಏನಿರಬಹುದು?!!, ಇದು ಯಾವ ದಾಸರ ಕೂಟವೆಂದರೆ..

√ನಿಷ್ಠಾವಂತ,ಪ್ರಾಮಾಣಿಕ ಉಮೇಶ; ಕೆಲಸ ಮಾಡುವ ಕಚೇರಿ ಭ್ರಷ್ಟರಿಂದ ಅಪ್ರಮಾಣಿಕರಿಂದ ತುಂಬಿದ ದಾಸಕೂಟ..
√ ಆಡಿ ನಲಿಯುವ ವಯಸ್ಸಿನಲ್ಲಿ ಮುದುಕನ ಪತ್ನಿಯಾದ ಕಾವೇರಿ; ನಿತ್ಯ ನರಕ ಅನುಭವಿಸುವ ದಾಸಕೂಟ..
√ ಬ್ರಿಟಿಷರಿಂದ ಮುಕ್ತಗೊಂಡ ಭಾರತಕ್ಕೆ ದೊರೆತದ್ದು; ಭ್ರಷ್ಟ ರಾಜಕಾರಣಿ ಮುಖಂಡರ ದಾಸಕೂಟ..
ಕಥಾನಾಯಕ ಉಮೇಶ ಗಾಂಧೀಜಿಯವರ ಉದಾತ್ತ ಆದರ್ಶ ಮೌಲ್ಯಗಳನ್ನು ರೂಢಿಸಿಕೊಂಡ ಅಪ್ಪಟ ಪ್ರಾಮಾಣಿಕ ಸಾಚ ವ್ಯಕ್ತಿ. ಕಾಲೇಜಿನಿಂದಲೇ ಹೋರಾಟದ ಮನೋಭಾವ ಹೊಂದಿದವನು, ಅನ್ಯಾಯ ಕಂಡರೆ  ಸ್ವಲ್ಪವೂ ಸಹಿಸದವನು.. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಸ್ವಾತಂತ್ರ್ಯ,ಪ್ರಾಮಾಣಿಕತೆ,ಬಾಲ್ಯವಿವಾಹ ಹೀಗೆ ಹಲವು ವಿಷಯಗಳಲ್ಲಿ ಉದ್ದುದ್ದ ಭಾಷಣ ಮಾಡುತ್ತಿದ್ದ..
ಆದರೆ ಮುಂದೆ ಇವನು ಕೆಲಸ ಮಾಡುವ ಕಚೇರಿ ಭ್ರಷ್ಟರ ತಾಣವಾಗಿರುತ್ತದೆ ಅಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ..
ತಾನು ಎತ್ತಿ ಆಡಿಸಿದ ಚಿಕ್ಕ ಹುಡುಗಿ ಕಾವೇರಿಯನ್ನು ಇವನ ತಂದೆ ಮದುವೆಯಾಗುವನು.. ತನಗಿಂತ ಚಿಕ್ಕವಳಾಗಿದ್ದಾಗ ಕಾವೇರಿ ಉಮೇಶನಿಗೆ ತಾಯಿಯಾಗುವಳು, ಬಾಲ್ಯ ವಿವಾಹವಾದ ಕಾವೇರಿ ಪತಿಯಿಂದ ಸುಖ ಕಾಣದೆ ನರಳುವುದು..
ನನಗಿಷ್ಟವಿಲ್ಲದಿದ್ದರೂ ಉಮೇಶ ನಾಗಮ್ಮಳೊಂದಿಗೆ ಸಂಸಾರ ನಡೆಸುವುದು..
ಹೀಗೆ ಜಗತ್ತೇ ಒಂದು ದಾಸಕೂಟ.. ಜಗತ್ತಿನ ಆಗು-ಹೋಗುಗಳಲ್ಲಿ ಜೀವನ ಸಮಸ್ಯೆಗಳು ಅನಂತ. ಹುಟ್ಟು-ಸಾವುಗಳು ವ್ಯಕ್ತಿಗಳಿಗೆ ಮಾತ್ರವೇ ಹೊರತು, ವಿಚಾರಗಳಿಗಲ್ಲ..
ಇಂತಹ ದಾಸ್ಯರಿಂದಲೇ ತುಂಬಿದ ಕಾದಂಬರಿಯಲ್ಲಿ ನನ್ನ ಮನಸ್ಸಿನಲ್ಲಿ ಉಳಿದ ಪಾತ್ರವೆಂದರೆ ಸುಬ್ಬಕ್ಕ..
ಸುಬ್ಬಕ್ಕ ನಾಗಮ್ಮನ ಅತ್ತಿಗೆ.. ಆಹಾ! ಅದೆಂತಹ ಪಾತ್ರ.. ಗೊಡ್ಡು ಸಂಪ್ರದಾಯಗಳನ್ನು ಮೆಟ್ಟಿನಿಲ್ಲುವ ದಿಟ್ಟ ಮಹಿಳೆ ಸುಬ್ಬಕ್ಕ..
ಕಾದಂಬರಿಯ ಉಮೇಶ ನಮ್ಮೆಲ್ಲರಲ್ಲಿಯೂ ಇರುವನು. ಮಗು ಹುಟ್ಟಿದಾಗ ವಿಶ್ವಮಾನವನಾಗಿ ಬೆಳೆದಂತೆಲ್ಲ ಜಾತಿ,ಧರ್ಮ,ಸಮಾಜದ ಕಟ್ಟಳೆಗಳ ಬಂಧನದಲ್ಲಿ ಸಿಲುಕಿ ಅಲ್ಪನಾಗುತ್ತಾನೆ.. ಆದರೆ ಈ ಬಂಧನಗಳಿಂದ ಮುಕ್ತನಾಗಿ ಬದುಕಬೇಕು ನಮ್ಮೊಳಗಿನ ಮೌಲ್ಯಗಳನ್ನು ಕಳೆದುಕೊಳ್ಳದೆ ಜೀವಿಸಬೇಕು ಎಂಬುದು ದಾಸಕೂಟದ ಆಶಯ..

ಬೀಚಿಯವರ ಕಾವ್ಯರಚನಾ ಶೈಲಿ ಅದ್ಭುತವಾಗಿದೆ..ನವಿರಾದ ಹಾಸ್ಯ ವ್ಯಂಗ್ಯದ ಮೂಲಕವೇ ಸಮಾಜದ ಅನಿಷ್ಟಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಕಾದಂಬರಿಯ ಪ್ರತಿಯೊಂದು ಸಾಲು ಇಂದಿನ ಸಮಾಜದ ಸ್ಥಿತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ..

Friday, March 6, 2020

ಪೂರ್ಣಚಂದ್ರ ತೇಜಸ್ವಿ

                              ಪೂರ್ಣಚಂದ್ರ ತೇಜಸ್ವಿ