ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, April 28, 2023

ಜಾಲಹಳ್ಳಿಯ ಕುರ್ಕ (ಕಾಡಿನ ಕತೆಗಳು - 3)

 ಪುಸ್ತಕ:- ಜಾಲಹಳ್ಳಿಯ ಕುರ್ಕ (ಕಾಡಿನ ಕತೆಗಳು - 3)

ಲೇಖಕರು:- ಪೂರ್ಣಚಂದ್ರ ತೇಜಸ್ವಿ


ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ರೂಪಾಂತರಿಸಿದ ಪುಸ್ತಕ *ಕಾಡಿನ ಕತೆಗಳು*. ಈ ಪುಸ್ತಕದ ಮೂರನೇ ಭಾಗವೇ  "ಜಾಲಹಳ್ಳಿ ಕುರ್ಕ"..

ಕಾಡಿನ ಕತೆಗಳು-೧,೨,೩,೪ ನಾಲ್ಕು ಭಾಗಗಳಲ್ಲಿ ವಿರಚಿತ ಈ ಪುಸ್ತಕ ಕೆನೆತ್ ಆಂಡರ್ಸನ್ ಅವರ ಪುಸ್ತಕಗಳ ಭಾವಾನುವಾದವಾಗಿದೆ. ಕೆನೆತ್ ಆಂಡರ್ಸನ್ ಅವರು ಮೂಲತಃ ಸ್ಕಾಟ್ಲೆಂಡ್ ದೇಶದವನು. ಭಾರತಕ್ಕೆ ಬಂದು ನೆಲಸಿ ನಿಜ ಭಾರತೀಯರಿಗಿಂತ ತುಸು ಹೆಚ್ಚೇ ಭಾರತವನ್ನು ಪ್ರೀತಿಸಿ ಜೀವಿಸಿದ ವ್ಯಕ್ತಿ.. ಅದರಲ್ಲೂ ನಮ್ಮ ದಕ್ಷಿಣ ಭಾರತ ಇವರ ನೆಚ್ಚಿನ ತಾಣ.. ಮೂಲತಃ ಬೇಟೆಗಾರರಾಗಿದ್ದು ಅಷ್ಟೇ ಒಳ್ಳೆಯ ಲೇಖಕ. ತಾನು ಕಂಡ ಭಾರತದ ಸಂಸ್ಕೃತಿ,ಸಂಪ್ರದಾಯ ಇಲ್ಲಿನ ಮುಗ್ಧ ಜನರು ಹಾಗೂ ತಾನು ಹೊಡೆದುರುಳಿಸಿದ ನರಭಕ್ಷಕಗಳ ರೋಚಕ ಘಟನೆಗಳ ಕುರಿತು ಹಲವು ಪುಸ್ತಕಗಳನ್ನು ಬರೆದಿದ್ದಾರೆ.. ಇವರ ಪುಸ್ತಕಗಳನ್ನು ಕನ್ನಡ ಭಾಷೆಗೆ ಭಾವಾನುವಾದಿಸಿ ಕೊಟ್ಟ ಕೀರ್ತಿ ತೇಜಸ್ವಿಯವರಿಗೆ ಸಲ್ಲುತ್ತದೆ. ಮೂಲ ಪುಸ್ತಕಗಳಲ್ಲಿನ ರೋಚಕತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುವಾದಿಸಿದ್ದಾರೆ. ಕಾಡಿನ ಕತೆಗಳು ಪುಸ್ತಕಗಳನ್ನು ಓದಿದರೆ ನಾವೇ ಸ್ವತಃ ಆಂಡರ್ಸನ್ ಜೊತೆ ಬೇಟೆಗೆ ಹೋಗಿ ಬಂದ ಅನುಭವ ನೀಡುತ್ತವೆ..


ಜಾಲಹಳ್ಳಿಯ ಕುರ್ಕ ಎಂಬ ಪುಸ್ತಕದಲ್ಲಿ ನಾಲ್ಕು ಕತೆಗಳನ್ನು ಕಾಣಬಹುದು.

೧ - ದಿಗುವಮೆಟ್ಟದ ಕೊಲೆಗಡುಕ

೨ - ಮಂಚಿಹಳ್ಳಿಯ ಮುಗ್ಧರು

೩ - ಭಯಾನಕ ಮಮ್ಮಟಿವಾಯನ್

೪ - ಜಾಲಹಳ್ಳಿಯ ಕುರ್ಕ



'ದಿಗುವಮೆಟ್ಟದ ಕೊಲೆಗಡುಕ' ದಿಗುವಮೆಟ್ಟ ಎಂಬುದು ಆಂಧ್ರಪ್ರದೇಶದಲ್ಲಿರುವ ಒಂದು ಸಣ್ಣ ಊರು. ಆಂಧ್ರದ ಗುಂತಕಲ್ಲು ರೈಲ್ವೆ ಜಂಕ್ಷನ್‌ನಿಂದ ಪೂರ್ವಕ್ಕೆ ಹೋದರೆ ಈ ದಿಗುವಮೆಟ್ಟ ಎಂಬ ರೈಲ್ವೆ ನಿಲ್ದಾಣ ಸಿಗುತ್ತದೆ. ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದ್ದ ಈ ಸ್ಥಳ ನಗರದ ಸದ್ದು ಗದ್ದಲದಿಂದ ದೂರ, ಶಾಂತಿಯ ನೆಮ್ಮದಿ ನೀಡುವಂತಿತ್ತು.. ಇಲ್ಲಿ ಒಂದು ಚಿರತೆ ಅಲ್ಲಿನ ಜನರಿಗೆ ಉಪಟಳ ನೀಡುತ್ತಿರುತ್ತದೆ. ಆ ಚಿರತೆಯಿಂದ ಜನರಿಗೆ ಮುಕ್ತಿ ದೊರಕಿಸಿದ ಘಟನೆ ಇಲ್ಲಿದೆ.. ಆಲೀಂಖಾನ್ ಅಲ್ಲಿನ ಟಿಬಿಯಲ್ಲಿ ಕೆಲಸ ಮಾಡುವವ,ಮೊದಲು ಇವನ ನಾಯಿಯನ್ನು ನಂತರ ತಂಗಿಯ ಮಗಳನ್ನು ಹಾಗೂ ರೈಲ್ವೆ ಸ್ಟೇಷನ್‌ನಲ್ಲಿ ಕಾರ್ಯ ನಿರ್ವಹಿಸುವವರನ್ನು ಹೀಗೆ ಹಲವು ಜನರನ್ನು ಬಲಿ ಪಡೆದ ಆ ಚಿರತೆ ನರಭಕ್ಷಕನಾಗಿ ರೂಪುಗೊಂಡಿರುತ್ತದೆ.

ಆಂಡರ್ಸನ್ ಅವರ ಬೇಟೆಗಾರಿಕೆಯ ಜೊತೆಯಲ್ಲಿ ಅವರು ಇಲ್ಲಿನ ಜನರು,ಸ್ಥಳಗಳ ವರ್ಣನೆ ನಮ್ಮಲ್ಲಿ ಹೆಮ್ಮೆಯ & ಆತ್ಮೀಯ ಭಾವನೆ ಮೂಡಿಸುತ್ತದೆ.


'ಮಂಚಿಹಳ್ಳಿಯ ಮುಗ್ಧರು' ಸೇಲಂ ಜಿಲ್ಲೆಯ ಕಾಡಿನೊಳಗಿದ್ದ ಚಿಕ್ಕ ಹಳ್ಳಿ ಮಂಚಿ.. ಇಲ್ಲಿಯ ಆದಿವಾಸಿಗಳಿಗೆ ಜೀವನಕ್ಕೆ ಕಾಡೇ ಆಧಾರವಾಗಿತ್ತು. ಹೆಜ್ಜೇನು,ಗಿಡಮೂಲಿಕೆ, ಬಿದಿರು ಅರಣ್ಯೋತ್ಪನ್ನಗಳಿಂದಲೇ ಹೊಟ್ಟೆ ಹೊರೆಯುತ್ತಿದ್ದರು. ಈ ಕಾಡಿನ ಹುಲಿ ಭಯಾನಕ ನರಭಕ್ಷಕನಾಗಿ ಇವರ ಅಸ್ತಿತ್ವವನ್ನೇ ನಡುಗಿಸಿತು. ಬೇಟೆಗಾರನಿಗೆ ಕಾಡು ಅಲ್ಲಿನ ಜೀವಿಗಳು ಯಾವ ರೀತಿಯಲ್ಲಿ ಸಹಕಾರಯಾಗಬಲ್ಲವು ಎನ್ನುವುದಕ್ಕೆ ಇಲ್ಲಿ ಬರುವ ಆನೆಯ ಘಟನೆಯೇ ಸಾಕ್ಷಿ..


' ಭಯಾನಕ ಮಮ್ಮಟಿವಾಯನ್ ' ಇದು ಕಾಡಿನ ಢಕಾಯಿತನ ಕತೆ. ಒಂಬತ್ತು ಕೊಲೆ ಮಾಡಿದ ಕೊಲೆಪಾತಕಿ ಅವನು. ಅವನ ಹೆಸರು ಸೆಲ್ವರಾಜ್ ಎಂದು. ಒಂದು ಸಣ್ಣ ಜಗಳ ತಂದೆಯ ಸಾವಿಗೆ ಹಾಗೂ ತಾನು 9 ಕೊಲೆ ಮಾಡಲು ಕಾರಣವಾಗುತ್ತೆ,ನಂತರ ಬದುಕಲು ಅನಿವಾರ್ಯ ಎಂಬಂತೆ ಢಕಾಯಿತಿ ಮಾಡುವ ಸ್ಥಿತಿ ಬರುವುದು. ಇವನು ಜಮೀನ್ದಾರರು,ಶ್ರೀಮಂತರಿಂದ ದೋಚಿ ಬಡಬಗ್ಗರಿಗೆ ಹಂಚುತ್ತಿದ್ದನು ಒಂದು ರೀತಿಯಲ್ಲಿ ರಾಬಿನ್‌ಹುಡ್ ಎಂದೇ ಹೇಳಬಹುದು. ಕಾವೇರಿ ನದಿಯಿಂದ ಚಿನಾರ್ ನದಿವರೆಗೆ ಹಾಗೂ ಕೊಳ್ಳೆಗಾಲ ಸೇಲಂ ಪ್ರದೇಶಗಳು ಇವನ ಕಾರ್ಯಕ್ಷೇತ್ರ.. ಇವನಿಗೆ 36 ವರ್ಷ ವಯಸ್ಸಾಗಿತ್ತು, ತುಟಿಗಳು ಉಬ್ಬಿದ್ದರಿಂದ ಇವನನ್ನು "ಮುಮ್ಮಟಿವಾಯನ್" ಎಂದು ಕರೆಯುತ್ತಿದ್ದರು.

ಮುಮ್ಮಟಿಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ ಇಂತಹ ಹಳ್ಳಿಯಲ್ಲಿಯೇ ದರೋಡೆ ಮಾಡುವುದಾಗಿ ಒಂದು ವಾರ ಮುಂಚಿತವಾಗಿ ಪೋಲೀಸ್ ಸ್ಟೇಷನ್ ಎದುರಿಗೆ ನೋಟಿಸ್ ಅಂಟಿಸುತ್ತಿದ್ದ. ಇವನ ಇಂತಹ ಹಲವು ರೋಚಕ ಸಾಹಸಗಳು ಇಲ್ಲಿವೆ. ಇವನ ಅತಿರೇಕಗಳಿಂದ ಉದ್ರೇಕಗೊಂಡ ಪೋಲಿಸ್ ಇವನ ಬಂಧಿಸಲು ಹಲವು ಪ್ರಯತ್ನ ಮಾಡಿದರೂ ಇವನು ಕೈಗೆ ಸಿಗುತ್ತಿರಲಿಲ್ಲ. ಹೊಗೆನಕಲ್ ಜಲಾಶಯದ ಮೇಲೆ ಆಣೆಕಟ್ಟು ನಿರ್ಮಿಸುವ ಯೋಜನೆಯಿಂದ ಈ ಭಾಗಕ್ಕೆ ಇಂಜಿನಿಯರ್ ಅಧಿಕಾರಿಗಳು ಭೇಟಿ ನೀಡಿದ್ದರು ಇದೇ ಭಾಗದ ಕಾಡಿನಲ್ಲಿ ನರಭಕ್ಷಕಗಳ ಬೇಟೆಯಾಡುವ ಆಂಡರ್ಸನ್ ಸಹ ಇದ್ದರು. ಮುಮ್ಮಟಿಯ ಕತೆಗಳನ್ನು ಕೇಳಿದ್ದ ಆಂಡರ್ಸನ್‌ಗೆ ಅವನನ್ನು ಬೇಟಿ ಮಾಡಬೇಕೆಂಬ ಆಸೆ ಇತ್ತು. ಇಬ್ಬರ ಭೇಟಿ ಮುಮ್ಮಟಿಯ ಜೀವನವನ್ನೇ ಬದಲಾಯಿಸಿ ಹೊಸ ವ್ಯಕ್ತಿಯಾಗಿ ಮಾಡುತ್ತದೆ. ಮುಮ್ಮಟಿ " ಓಮ್ ಕೃಷ್ಣ " ಆಗಿ ಪರಿವರ್ತನೆ ಹೊಂದುತ್ತಾನೆ.


ಜಾಲಹಳ್ಳಿಯ ಕುರ್ಕ  ಇದು ನರಭಕ್ಷಕ ಹುಲಿ / ಚಿರತೆಯ ಕತೆಯಲ್ಲ. ಇದು ತನ್ನ ಆತ್ಮರಕ್ಷಣೆಗಾಗಿ ಮೂವರನ್ನು ಕೊಂದು ಹಲವರನ್ನು ಗಾಯ ಮಾಡಿದ ಕುರ್ಕನ ಕತೆ. ಕುರ್ಕ ಎಂದರೆ ಇದೊಂದು ಚಿಕ್ಕ ಜಾತಿಯ ಚಿರತೆ. ಇನ್ನೂ ಜಾಲಹಳ್ಳಿ ವಿಚಾರಕ್ಕೆ ಬಂದರೆ ಇದು ನಮ್ಮ ಬೆಂಗಳೂರಿನ ಬಳಿಯ ಜಾಲಹಳ್ಳಿ ಹೌದು.. 1935ರಲ್ಲಿ ನೂರು ಮನೆಗಳಿರುವ ಸಣ್ಣ ಹಳ್ಳಿ ಜಾಲಹಳ್ಳಿ.ಇಲ್ಲಿ ಹಲವು ನೆಡುತೋಪುಗಳಿದ್ದವು. ಕಾಡು ಗಿಡಗಳು ಅಭೇದ್ಯವಾಗಿ ಬೆಳೆದಿದ್ದವು. ಇಂದು ಇಲ್ಲಿ ಮೆಟ್ರೋಪಾಲಿಟನ್ ಪ್ರದೇಶವಾಗಿ ಕಾಂಕ್ರೀಟ್ ಕಾಡು ಬೆಳೆದಿದೆ. ಕುರ್ಕಗಳು ಸಾಮಾನ್ಯವಾಗಿ ಕುರಿ ಆಡು ಮೊಲ ಈ ರೀತಿಯ ಪ್ರಾಣಿಗಳ ಭಕ್ಷಿಸುತ್ತವೆ. ಮನುಷ್ಯರನ್ನು ಕೊಲ್ಲುವ ನರಭಕ್ಷಕ ಆಗುವುದಿಲ್ಲ. ಕುರಿ ಹಿಡಿಯಲು ಬಂದಿದ್ದ ಕುರ್ಕಗೆ ದಫೇದಾರೊಬ್ಬ ಗುಂಡು ಹೊಡೆದನು. ಅದು ಗುರಿ ತಪ್ಪಿ ಹಿಂಗಾಲಿಗೆ ಗಾಯ ಮಾಡಿತು. ಚಿರತೆಯನ್ನು ಹೊಡೆದುರುಳಿಸಲು ಊರನ ಜನರು ಶಿಕಾರಿ ನಾಯಿಗಳೊಂದಿಗೆ ಕಾಡು ಸೋಸಲು ಆರಂಭಿಸುತ್ತಾರೆ‌. ತನ್ನ ರಕ್ಷಣೆಗಾಗಿ ಚಿರತೆ ಗುಂಡು ಹಾರಿಸಿದ್ದ ಒಬ್ಬ ಇಂಗ್ಲಿಷ್ ಬೇಟೆಗಾರನನ್ನು ಪರಚಿ ಕೊಲ್ಲುತ್ತದೆ‌. ಮತ್ತೊಬ್ಬ ಸ್ಥಳೀಯ ಬೇಟೆಗಾರ ಹಾಗೂ ಕುರಿ ಕಾಯುವವ ಹೀಗೆ ಮೂರು ಬಲಿ ಪಡೆಯುತ್ತದೆ. ಬೇಟೆಗಾರರ ಗುಂಡುಗಳಿಂದ ಗಾಯಗೊಂಡಿದ್ದ ಕುರ್ಕ ಒಂದು ವಾರದ ನಂತರ ಮರಣಹೊಂದುತ್ತದೆ. ಹೀಗೆ ಜಾಲಹಳ್ಳಿ ಜನ ಕುರ್ಕನಿಂದ ನಿಟ್ಟುಸಿರು ಬಿಡುವಂತಾಯಿತು..

ಒಂದು ಕಾಲದಲ್ಲಿ ಜಾಲಹಳ್ಳಿಯಲ್ಲಿ ಚಿರತೆ ಓಡಾಡಿಕೊಂಡಿದ್ದವು ಎಂದರೆ ಜನ ಅಚ್ಚರಿಪಡುವಷ್ಟು ಜಾಲಹಳ್ಳಿ ಬದಲಾಗಿಹೋಗಿದೆ.

ಕಾಡು ಕಾಡುಪ್ರಾಣಿಗಳು ಎಷ್ಟು ಮುಗ್ಧವೋ ತಮ್ಮ ಮೇಲೆ ದಾಳಿಯಾದರೆ ಅಷ್ಟೇ ಕ್ರೂರಿಗಳಾಗಬಲ್ಲವು..‌ ಮೈಯ ತುಂಬಾ ಗಾಯಗಳಾಗಿದ್ದರೂ ತನ್ನ ಕೊಲ್ಲಲೂ ಬಂದವರ ಮೇಲೆ ಮುಯ್ಯಿ ತೀರಿಸಿಕೊಳ್ಳಲು ಹೋರಾಡುವ ಚಿಕ್ಕ ಕುರ್ಕನ ಮೇಲೆ ಹೆಮ್ಮೆ ಮೂಡುತ್ತದೆ..

ಕಾಡು ಕಾಡುಪ್ರಾಣಿಗಳು ನಮ್ಮ ಅಸ್ಮಿತೆ, ಪ್ರಾಣಿಗಳಿಲ್ಲದ ಕಾಡು ಸುಡುಗಾಡಿಗೆ ಸಮ.. ಬದುಕಿ ಬದುಕಲು ಬಿಡಿ..




No comments: